ಗಂಗಾವತಿ: ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು’ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಗ್ರಾಮೀಣ ಯುವ ಘಟಕದ ಅಧ್ಯಕ್ಷ ಜಂಬಣ್ಣ ತಾಳೂರು ಒತ್ತಾಯಿಸಿದರು.
ತಾಲ್ಲೂಕಿನ ಆಚಾರ ನರಸಾಪುರ ಗ್ರಾಮದಲ್ಲಿ ಭಾನುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಲಿಂಗಾಯತ ಸಮಾಜ ದೊಡ್ಡ ಸಮಾಜವಾಗಿದೆ. ಸಾಕಷ್ಟು ಜನರು ಹಿಂದುಳಿದವರು ಇದ್ದಾರೆ ಎಂದರು.
ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಅಗತ್ಯ. ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವ ಮೂಲಕ ಆರ್ಥಿಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಗ್ರಾಮದ ಪ್ರಮುಖರಾದ ಶರಣಪ್ಪ ಹೆಬ್ಬಾಳ, ರುದ್ರಪ್ಪ, ನಾಗರಾಜ್ ಬರಗೂರು, ದೇವೇಂದ್ರಗೌಡ, ನಾಗರಾಜ್ ಅಳಳ್ಳಿ, ಗಂಗಣ್ಣ ಟಿ., ಬಸವರಾಜ ತಿಪ್ಪಶೆಟ್ಟಿ, ಅಯ್ಯಣ್ಣ ಹೇಮಗುಡ್ಡ, ಶರಣಪ್ಪ ಸಾತನೂರು, ವಿಜಯಕುಮಾರ್ ತಾಳೂರು, ಶರಣಪ್ಪ ತಿಪ್ಪೆಶೆಟ್ಟಿ, ದ್ಯಾಮಣ್ಣ ಹಾಗೂ ತಿಪ್ಪಣ್ಣ ನಾಯಕ ಇದ್ದರು.