ಹನುಮಸಾಗರ: ‘ರಂಗಭೂಮಿಯದ್ದು ಗಟ್ಟಿ ಕಲೆಯಾಗಿದ್ದು, ಹಿಂದೆ ಮನರಂಜನೆಗೆ ಗ್ರಾಮಸ್ಥರು ರಂಗಭೂಮಿಯನ್ನೇ ಅವಲಂಬಿಸಿದ್ದರು’ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
‘ಪ್ರಜಾವಾಣಿ’ ಅಮೃತ ಮಹೋತ್ಸವ ವರ್ಷಾಚರಣೆ ಪ್ರಯುಕ್ತ ಮಂಗಳವಾರ ಇಲ್ಲಿನ ಕರಿಸಿದ್ದೇಶ್ವರ ಸಮುದಾಯ ಭವನದಲ್ಲಿ ನಿಸರ್ಗ ಸಂಗೀತ ವಿದ್ಯಾಲಯ, ರಂಗ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2022-23ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಕಲಾವಿದರ ಸಂವಾದ ಹಾಗೂ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘ಕೋವಿಡ್ ಸಂದರ್ಭದಲ್ಲಿ ಬಹುತೇಕ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದರು. ಆಗ ಅವರ ನೆರವಿಗೆ ಬಂದಿದ್ದೇ ಹನುಮಸಾಗರ ರಂಗ ಕಲಾವಿದರ ಸಂಘ ಎಂಬುದು ಹೆಮ್ಮೆಯ ಸಂಗತಿ’ ಎಂದು ಅವರು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ ಮಾತನಾಡಿ, ‘ಇಲಾಖೆ ಮಕ್ಕಳಿಗೆ ಚಿಗುರು, ಯುವಜನರಿಗೆ ಯುವ ಸೌರಭ, ಸಾಂಸ್ಕೃತಿಕ ಸೌರಭ, ಗಿರಿಜನ ಉತ್ಸವ, ಪರಿಶಿಷ್ಟ ಜಾತಿಯ ಕಲಾವಿದರಿಗೆ ಜನಪದ ಉತ್ಸವ, ನೃತ್ಯ, ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತಪಡಿಸುವ ಅವಕಾಶ ನೀಡುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವರಾಜ ಹಳ್ಳೂರ ಮಾತನಾಡಿ,‘ಮೂರು ದಶಕಗಳಿಂದ ಕಲಾವಿದರ ಸೇವೆ ಮಾಡುತ್ತಿರುವ ಹನುಮಸಾಗರ ರಂಗ ಕಲಾವಿದರ ಸಂಘಕ್ಕೆ ರಾಜ್ಯ ಮಟ್ಟದ ಸರ್ಕಾರಿ ಗೌರವ ದೊರಕಬೇಕಾದ ಅವಶ್ಯಕತೆ ಇದೆ’ ಎಂದರು.
ಮುಖಂಡ ವಿಠಲ್ಶ್ರೇಷ್ಟಿ ನಾಗೂರ, ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಪ್ರಮೋದ ಕುಲಕರ್ಣಿ, ಮೈನುದ್ದೀನ್ ಖಾಜಿ, ಶಿಕ್ಷಕ ರಾಮಚಂದ್ರ ಬಡಿಗೇರ ಮಾತನಾಡಿದರು. ‘ಪ್ರಜಾವಾಣಿ’ ಪತ್ರಿಕೆಯ ಹಿರಿಯ ವಿತರಕ ಪ್ರಾಣೇಶಾಚಾರ್ಯ ಪುರೋಹಿತ ಅವರನ್ನು ಸನ್ಮಾನಿಸಲಾಯಿತು.