ಕನಕಗಿರಿ: ಇಲ್ಲಿನ ಹುಲಿಹೈದರ ಗ್ರಾಮದಲ್ಲಿ ಹಿಂದಿನ ವರ್ಷದ ಮೊಹರಂ ವೇಳೆ ಎರಡು ಗುಂಪಿನ ನಡುವೆ ಘರ್ಷಣೆ ನಡೆದು ಸಾವು ನೋವು ಸಂಭವಿಸಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಸಲ ಬುಧವಾರದಿಂದ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜುಲೈ 29ರಂದು ಮೊಹರಂ ಇದೆ.
ಜುಲೈ 19ರಿಂದ 29ರ ಮಧ್ಯರಾತ್ರಿ ತನಕ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಕನಕಗಿರಿ ತಹಶೀಲ್ದಾರ್ ಸಂಜಯ ಕಾಂಬ್ಳೆ ತಿಳಿಸಿದ್ದಾರೆ.
ಹಿಂದಿನ ವರ್ಷ ನಡೆದಿದ್ದ ಘಟನೆಯಲ್ಲಿ ಒಟ್ಟು 84 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 81 ಜನ ಜಾಮೀನು ಪಡೆದು ಗ್ರಾಮಕ್ಕೆ ಮರಳಿದ್ದಾರೆ. ಇನ್ನುಳಿದ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಬಳಿಕ ಅನೇಕ ಜನ ತಿಂಗಳಾನುಗಟ್ಟಲೆ ಊರು ತೊರೆದಿದ್ದರು.
ಆಗಿನಿಂದಲೂ ಇಂದಿನ ತನಕ ಗ್ರಾಮದಲ್ಲಿ ಪೊಲೀಸರ ಗಸ್ತು ಹಗಲಿರುಳು ಮುಂದುವರಿದಿದೆ. ಈಗಲೂ ಪ್ರಕ್ಷುಬ್ದ ವಾತಾವರಣ ಇರುವ ಕಾರಣ ಸಾರ್ವಜನಿಕ ಹಿತದೃಷ್ಟಿಯಿಂದ ಮೊಹರಂ ಆಚರಿಸದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಶವ ಸಂಸ್ಕಾರ ಹಾಗೂ ಮದುವೆ ಕಾರ್ಯಕ್ಕೆ ಇದು ಅನ್ವಯವಾಗುವುದಿಲ್ಲ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.