ಯಲಬುರ್ಗಾ: ಪಾಕ್ ಪರ ಘೋಷಣೆ ಕೂಗಿದ ದೇಶ ದ್ರೋಹಿಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ದೇಶದ್ರೋಹಿ ಆರೋಪದ ಅಡಿಯಲ್ಲಿ ಬಂಧನಕ್ಕೆ ಒಳಗಾದ ಅಮೂಲ್ಯ ಹಾಗೂ ಆದ್ರಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದರ ಜತೆಗೆ ದೇಶದಿಂದ ಹೊರಹಾಕಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ನೇತೃತ್ವ ವಹಿಸಿದ್ದ ಜಿಲ್ಲಾ ಕಾಯಾಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿ,‘ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯ ಅನ್ನ ಉಂಡು ದೇಶಕ್ಕೆ ದ್ರೋಹಬಗೆಯುವ ಯಾರೇ ಆಗಿರಲಿ ಅವರು ದೇಶದಲ್ಲಿ ಇರಲು ಅನರ್ಹರು. ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಗೌರವವಿದೆ. ಅಂತಹ ಸ್ಥಾನದಲ್ಲಿದ್ದುಕೊಂಡು ಕ್ಷಮಿಸಲಾಗದಂತೆ ಹೇಳಿಕೆ ನೀಡುವ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ನೋವು ಉಂಟು ಮಾಡಿದ್ದಾರೆ. ಕಾರಣ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದರು. ಇವರ ಹಿಂದೆ ಇರುವ ಜನರನ್ನು ಪತ್ತೆಮಾಡುವುದು, ಇವರನ್ನು ಬೆಂಬಲಿಸುತ್ತಿರುವ ಸಂಘಟನೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.
ತಾಲ್ಲೂಕು ಘಟಕದ ಅಧ್ಯಕ್ಷ ಶಂಕರ ಮೂಲಿ, ಉಪಾಧ್ಯಕ್ಷ ವಿರೇಂದ್ರ ಈಳಿಗೇರ, ಕಾರ್ಯಾಧ್ಯಕ್ಷ ಶಿವರಾಜ ಚಿಕ್ಕೊಪ್ಪ, ಶರಣಕುಮಾರ ಬಡಿಗೇರ, ಮಲ್ಲೇಶಪ್ಪ ಕುಲಕರ್ಣಿ, ಹನಮೇಶ ಬುಡಶೆಟ್ನಾಳ ಹಾಗೂ ಇತರರು ಇದ್ದರು. ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರ ಮನವಿ ಸ್ವೀಕರಿಸಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ನುಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.