ಕೊಪ್ಪಳ: ಕಾಂಗ್ರೆಸ್ ಶಾಸಕ ಬಸವರಾಜ ರಾಯರಡ್ಡಿ, ಎಚ್.ಡಿ. ದೇವೇಗೌಡರು ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲವಾದರೆ ಅವರಿಗೆ ಕಪ್ಪು ಮಸಿ ಬಳಿಯುತ್ತೇವೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮಲ್ಲನಗೌಡ ಕೋನನಗೌಡ ಎಚ್ಚರಿಕೆ ನೀಡಿದರು.
‘ಈಗಿನ ಸರ್ಕಾರದಲ್ಲಿ ಸಚಿವ ಸ್ಥಾನಮಾನ ಸಿಗದ ಕಾರಣ ರಾಯರಡ್ಡಿ ಹತಾಶೆಗೊಂಡಿದ್ದಾರೆ. ಪ್ರಚಾರ ಗಿಟ್ಟಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರು ತಮ್ಮ ಬಾಯಿ ಹಾಗೂ ಮನಸ್ಸಿನ ನಿಯಂತ್ರಣ ಕಳೆದುಕೊಂಡಿದ್ದು ವಿದೇಶದಲ್ಲಿ ಒಳ್ಳೆಯ ಚಿಕಿತ್ಸೆ ಕೊಡಿಸಲು ಸರ್ಕಾರವೇ ವ್ಯವಸ್ಥೆ ಮಾಡಬೇಕು’ ಎಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕುಕನೂರು ತಾಲ್ಲೂಕಿನ ತಳಕಲ್ ಗ್ರಾಮದಲ್ಲಿ ನಡೆದ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ರಾಯರಡ್ಡಿ ಅವರು ದೇವೇಗೌಡ ಕ್ಯಾಬಿನೆಟ್ ನಲ್ಲಿ ಸಚಿವನಾಗಿದ್ದೆ. ಕುಮಾರಸ್ವಾಮಿ ನನ್ನ ಪಕ್ಕದಲ್ಲಿ ಬಂದು ನಿಲ್ಲಲು ಹೆದರುತ್ತಿದ್ದ ಎಂದು ಹೇಳಿದ್ದರು. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
‘ರಾಯರಡ್ಡಿ ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಏಕವಚನದಲ್ಲಿ ಮಾತನಾಡಿದಂತೆ ರಾಹುಲ್ ಗಾಂಧಿ ಬಗ್ಗೆಯೂ ಮಾತನಾಡಲಿ ನೋಡೊಣ. ರಾಯರಡ್ಡಿ ಅವರಿಗೆ ರಾಜಕೀಯ ಸ್ಥಾನಮಾನ ಕೊಟ್ಟಿದ್ದು ಜನತಾದಳ. ಮಾನಸಿಕ ಸ್ಥಿಮಿತ ಕಳೆದುಕೊಂಡವಂತೆ ವರ್ತಿಸುತ್ತಿರುವ ಅವರು ನೀಡುತ್ತಿರುವ ವಿವಾದದ ಹೇಳಿಕೆಗಳು ಯಲಬುರ್ಗಾ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಂತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ವೈದ್ಯಕೀಯ ವಿಭಾಗದ ರಾಜ್ಯ ಉಪಾಧ್ಯಕ್ಷ ಡಾ. ಮಹೇಶ ಗೋವನಕೊಪ್ಪ, ಮುಖಂಡರಾದ ಶರಣಪ್ಪ ರಾಂಪೂರು, ಬಸವರಾಜ ಗುಳಗುಳಿ, ಕೆಂಚಪ್ಪ ಹಳ್ಳಿ ಇದ್ದರು.
ಜನತಾ ಪರಿವಾರದಿಂದಲೇ ರಾಜಕೀಯ ಸ್ಥಾನಮಾನ ಗಳಿಸಿದ ಬಸವರಾಜ ರಾಯರಡ್ಡಿ ಈಗ ಅದೇ ಪಕ್ಷದ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷದ ಹಿರಿಯರಾದರೂ ಅವರಿಗೆ ಗೌರವ ಕೊಡಬೇಕಲ್ಲವೇ.ಮಲ್ಲನಗೌಡ ಕೋನನಗೌಡ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.