ಕೊಪ್ಪಳ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಲ್ಲಿ ತರಬೇತಿ ಪಡೆದ ಜಿಡಿಎ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಬೇಕು ಎಂದು ಆಗ್ರಹಿಸಿ ಎಸ್ಎಫ್ಐ ಸಂಘಟನೆ ಸದಸ್ಯರು ಹಾಗೂ ಜಿಡಿಎ ತರಬೇತಿ ಪಡೆದ ಅಭ್ಯರ್ಥಿಗಳು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೋವಿಡ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ‘ಜನರಲ್ ಡ್ಯೂಟಿ ಅಸಿಸ್ಟೆಂಟ್’ ಎಂಬ ಕೋರ್ಸ್ ಸೃಷ್ಟಿಸಿ 21 ದಿನಗಳ ತರಬೇತಿ ಕೊಟ್ಟು ನಂತರ ಮೂರು ತಿಂಗಳು ಆಸ್ಪತ್ರೆಯಲ್ಲಿ ತರಬೇತಿ ನೀಡಿ ನಂತರ ಉದ್ಯೋಗ ಕೊಡಲಾಗಿತ್ತು. ಬಹಳಷ್ಟು ವಿದ್ಯಾರ್ಥಿಗಳು ತರಬೇತಿ ಮುಗಿಸಿದರೂ, ಉದ್ಯೋಗ ಸಿಕ್ಕಿಲ್ಲ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರ ಬಾಕಿ ಉಳಿಸಿಕೊಂಡ ವಿದ್ಯಾರ್ಥಿಗಳ ಮೂರು ತಿಂಗಳ ಸ್ಟೆಫಂಡ್ ಬಿಡುಗಡೆಗೊಳಿಸಿ ಉದ್ಯೋಗ ಕೊಡಬೇಕು ಎಂದರು.
ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಕಾರ್ಯದರ್ಶಿ ಸಿದ್ದಪ್ಪ ಎಂ., ಅಭ್ಯರ್ಥಿಗಳಾದ ನಿಂಗಪ್ಪ ಪೂಜಾರ, ಶ್ರೀನಿವಾಸ ರಮೇಶ, ಶರಣಪ್ಪ ಕಾವೇರಿ, ರೇಣುಕಾ, ಅಶ್ವಿನಿ, ಜ್ಯೋತಿ ಹಾಗೂ ಲಕ್ಷ್ಮೀ ಪಾಲ್ಗೊಂಡಿದ್ದರು.