ಗಂಗಾವತಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದರ ಜೊತೆಗೆ ಕಾಯಕ ಬಂಧುಗಳ ಸಹಾಯಧನಕ್ಕಾಗಿ ಹೊಸ ಜಾಬ್ ಕಾರ್ಡ್ ನೀಡುವಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲ್ಲೂಕ ಸಮಿತಿ ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಆವರಣದ ಮುಂದೆ ಪ್ರತಿಭಟನೆ ನಡೆಸಿತು.
ಕೂಲಿಕಾರರ ಸಂಘದ ತಾಲ್ಲೂಕ ಸಮಿತಿ ಈ ಹಿಂದೆ ಸೆ.9 ರಂದು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ತಾ.ಪಂ ಕಾರ್ಯಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಈ ವೇಳೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮನವಿ ಸಂಬಂಧಿಸಿದ ವಿಷಯದ ಕುರಿತು ಸೆ.22ರಂದು ಸಭೆ ನಡೆಸುವುದಾಗಿ ತಿಳಿಸಿದ್ದರು.
ಆದರೆ ಇದುವರೆಗೂ ಸಭೆ ನಡೆಸದೆ, ಕೂಲಿಕಾರರಿಗೆ ಸಭೆಯ ಕುರಿತು ಸಬೂಬು ಹೇಳುತ್ತಾ ಬರುತ್ತಿದ್ದಾರೆ. ಇಂತಹ ಬೇಜವಾಬ್ದಾರಿತನದ ಕೆಲಸವನ್ನು ತೀವ್ರವಾಗಿ ಖಂಡಿಸಲಾಗುತ್ತದೆ ಎಂದರು.
ತಾಲ್ಲೂಕಿನ ಕೆಸರಹಟ್ಟಿ, ಹೊಸಕೇರಾ, ಚಿಕ್ಕಜಂತಕಲ್, ವೆಂಕಟಗಿರಿ, ಹಣವಾಳ, ಡಣಾಪುರ, ಚಿಕ್ಕಬೆಣಕಲ್ ಗ್ರಾ.ಪಂ ವ್ಯಾಪ್ತಿಯಲ್ಲಿ ಎಲ್ಲ ಕಾರ್ಮಿಕರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕು. ಕಾಯಕ ಬಂಧುಗಳ ಸಹಾಯಧನ ಮತ್ತು ಆಶ್ರಯ ನಿವಾಸಗಳ ಹಣ ಬಿಡುಗಡೆ ಮಾಡಬೇಕು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ತೆರಳಲು ಟ್ರ್ಯಾಕ್ಟರ್ ಬಳಕೆ ಮಾಡಿದರೆ ಅದಕ್ಕೆ ಬಾಡಿಗೆ ರೂಪದಲ್ಲಿ ಹಣ ನೀಡಬೇಕು. ಕುಟುಂಬದಲ್ಲಿ ಇರುವ ಎಲ್ಲರಿಗೂ ಜಾಬ್ ಕಾರ್ಡ್ ನೀಡುವ ಕೆಲಸವಾಗಬೇಕು.
ಕಾಯಕ ಮಿತ್ರ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳಿಗೆ ಅವುಗಳನ್ನು ತಕ್ಷಣವೇ ಪರಿಶೀಲಿಸಬೇಕು. ಪ್ರತಿ ಮನೆಗೆ ವೈಯಕ್ತಿಕ ಶೌಚಾಲಯವನ್ನು ಮಂಜೂರು ಮಾಡುವ ಜೊತೆಗೆ ಮರಕುಂಬಿ ಗ್ರಾಮದ ರಸ್ತೆಗೆ ಮೊಹರಂ ಹಾಕಿಸುವಂತೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದರು.
ಜಿಲ್ಲಾಧ್ಯಕ್ಷ ಎಂ.ಬಸವರಾಜ, ಕಾರ್ಯದರ್ಶಿ ಶಿವಣ್ಣ, ಶ್ರೀನಿವಾಸ ಹೊಸಳ್ಳಿ, ಮರಿನಾಗಪ್ಪ, ಹುಸೇನಪ್ಪ.ಕೆ, ಬಸವರಾಜ, ನಾಗಮ್ಮ, ನಾಗರಾಜ, ಈರಣ್ಣ, ವಿರೇಶ, ನೀಲಮ್ಮ, ದುರಗಮ್ಮ, ಮಂಜುನಾಥ ಇದ್ದರು.