ಗಂಗಾವತಿ: ಕಾರಟಗಿ ತಾಲ್ಲೂಕಿನ ಲಕ್ಷ್ಮೀಕ್ಯಾಂಪ್ನ ಕುಂಟೋಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ವಂಶವೃಕ್ಷ ರಚನೆ ಕುರಿತು ಮಕ್ಕಳು ಹೆಳವರೊಂದಿಗೆ ಸಂವಾದ ನಡೆಸಿದರು.
ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ಕಲಾಂತರ್ಗತ ಕಲಿಕಾ ಯೋಜನೆ ಭಾಗವಾಗಿ ಜನಪದೀಯ ನೆಲೆಯಲ್ಲಿ ವಂಶವೃಕ್ಷ ಹಾಗೂ ಭಾಷಾ ಕೌಶಲ ಕಲಿಕಾ ಯೋಜನೆಗೆ ಲಕ್ಷ್ಮೀಕ್ಯಾಂಪ್ನ ಕುಂಟೋಜಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿತ್ತು.
ಮಕ್ಕಳ ಪಠ್ಯಕ್ರಮದಲ್ಲಿ ಕುಟುಂಬ, ಅದರ ಮೂಲ, ಅನುಕೂಲ ಹಾಗೂ ಅನಾನುಕೂಲದ ಕುರಿತು ಮಕ್ಕಳಿಗೆ ಮಾಹಿತಿ ಒದಗಿಸಬೇಕು. ಆದ್ದರಿಂದ 500 ವರ್ಷಗಳ ವಂಶವೃಕ್ಷ ಇತಿಹಾಸ ಇರುವ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲ್ಲೂಕಿನ ನಾಗಶೆಟ್ಟಿ ಕೊಪ್ಪದ ಸದ್ಗುರು ರಾಮಪ್ಪ ಇಮ್ಮಡಿ ಅವರನ್ನು ಶಾಲೆಗೆ ಕರೆಸಲಾಗಿತ್ತು.
ನಾಗಶೆಟ್ಟಿ ಕೊಪ್ಪದ ಸದ್ಗುರು ರಾಮಪ್ಪ ಇಮ್ಮಡಿ ಮಾತನಾಡಿ,‘ವಂಶ ವೃಕ್ಷ ರಚನೆಯಿಂದ ಬಹಳ ಲಾಭಗಳಿವೆ. ಕುಟುಂಬದ ಮೂಲ, ಬದುಕಿ ಬಂದ ದಾರಿ, ತಲೆಮಾರು, ಉದ್ದೇಶ, ಆಸ್ತಿ, ಸಾಧನೆ, ಸಂಬಂಧ, ಮನೆತನ, ಸ್ವಂತ ಊರು, ಹಿರಿಮೆ, ಕುಲದೈವ ಹಾಗೂ ಕುಲಕಸುಬು ಎಲ್ಲವನ್ನೂ ತಿಳಿಯಬಹುದು’ ಎಂದು ಹೇಳಿದರು.
ಮಕ್ಕಳು ವಂಶವೃಕ್ಷ ರಚನೆ, ಲಾಭ, ನಷ್ಟಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಗೊಂದಲ ನಿವಾರಿಸಿಕೊಂಡರು. ನಂತರ ತಮ್ಮ ಮನೆಯ ವಂಶವೃಕ್ಷ ರಚನೆ ಮಾಡಿದರು.
ಮುಖ್ಯಶಿಕ್ಷಕ ಸೋಮು ಕುದರಿಹಾಳ, ಶಿಕ್ಷಕ ಈರಯ್ಯ ಎಸ್.ಎಂ ಸೇರಿದಂತೆ ಭಾಷಾ ಕಲಿಕಾ ಯೋಜನೆ ಸಂಯೋಜಕರು, ಲಕ್ಷ್ಮೀಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಹಾಗೂ ಜನತಾ ಶಾಲೆಯ ಮಕ್ಕಳು, ಸಿಬ್ಬಂದಿ ಇದ್ದರು.