ಕನಕಗಿರಿ: ಸಮೀಪದ ಬೆನಕನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿದ್ದನಗೌಡ ಪಾಟೀಲ ಅವರಿಗೆ ಗ್ರಾಮಸ್ಥರು ಅರ್ಧ ತೊಲೆ ಬಂಗಾರ ನೀಡುವ ಮೂಲಕ ಶುಕ್ರವಾರ ರಾತ್ರಿ ಪೌರ ಸನ್ಮಾನ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪಾಟೀಲ ಮಾತನಾಡಿ, ‘ಶಿಕ್ಷಕ ಮನಸ್ಸು ಮಾಡಿದರೆ ಏನಾದರೂ ಸಾಧಿಸ ಬಹುದು ಎಂಬುದಕ್ಕೆ ಸಿದ್ದನಗೌಡ ಸಾಕ್ಷಿಯಾಗಿದ್ದಾರೆ. ಶಾಲೆಯಲ್ಲಿ ಪಾಠ ಪ್ರವಚನದ ಜತೆಗೆ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದು ಬಡ, ಹಿಂದುಳಿದ ವರ್ಗಗಳ ಮಕ್ಕಳನ್ನು ಶೈಕ್ಷಣಿಕ ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ’ ಎಂದು ಬಣ್ಣಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಿವಾನಂದ ವಂಕಲಕುಂಟಿ ಮಾತ ನಾಡಿ, ‘ಪ್ರತಿಯೊಬ್ಬರ ಪ್ರೀತಿ, ಸ್ನೇಹಕ್ಕೆ ಪಾತ್ರರಾಗಿದ್ದ ಸಿದ್ದನಗೌಡರ ವರ್ಗಾ ವಣೆಯಿಂದ ಗ್ರಾಮಕ್ಕೆ ನಷ್ಟವಾಗಿದೆ’ ಎಂದು ವಿಷಾದಿಸಿದರು.
ಕಲಕೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹಾದೇವಸ್ವಾಮಿ ಮಾತನಾಡಿ, ‘ಸರ್ಕಾರಿ ನೌಕರರಿಗೆ ವರ್ಗಾವಣೆ, ಬಡ್ತಿ, ನಿವೃತ್ತಿ ಅನಿವಾರ್ಯ ವಾಗಿದ್ದು, ಸಿದ್ದನಗೌಡರು ಉತ್ತಮ ಕೆಲಸ ಮಾಡಿದ್ದರು’ ಎಂದು ಹೇಳಿದರು.
ವರ್ಗಾವಣೆಗೊಂಡ ಶಿಕ್ಷಕ ಸಿದ್ದನಗೌಡ ಮಾತನಾಡಿ, ಗ್ರಾಮಸ್ಥರ ಸಹಕಾರ ಎಂದಿಗೂ ಮರೆಯುತ್ತಿಲ್ಲ. ಪ್ರತಿಯೊಂದು ಶಾಲಾ ಚಟುವಟಿಕೆಗಳಿಗೆ ಸಲಹೆ, ಸಹಕಾರ ನೀಡಿದ್ದಾರೆ. ಊರು ಬಿಟ್ಟು ಹೋಗಲು ಮನಸು ಇಲ್ಲ ಎಂದು ಆನಂದಬಾಷ್ಪ ಹರಿಸಿದರು.
ಮುಖ್ಯಶಿಕ್ಷಕ ಮನೋಹರ ಪತ್ತಾರ, ವಸತಿ ನಿಲಯದ ಮೇಲ್ವಿಚಾರಕ ವಿರುಪನಗೌಡ, ಶಿಕ್ಷಕ ಬೆಟ್ಟಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ ಮಲ್ಲಯ್ಯಸ್ವಾಮಿ, ಹನು ಮಂತಪ್ಪ, ಪ್ರಮುಖರಾದ ವೀರೇಶ, ಸಂಜೀವಕುಮಾರ, ಶಿವಪ್ಪ ಇದ್ದರು.