ಗಂಗಾವತಿ: ‘ಸರ್ಕಾರದ ನಿಯಮ ಗಾಳಿಗೆ ತೂರಿತುಗ್ಲೆಪ್ಪ ದೇಸಾಯಿ ಎನ್ನುವವರನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಪ್ರಭಾರ ತಾಲ್ಲೂಕು ಸಹಾಯಕ ನಿರ್ದೇಶಕರನ್ನಾಗಿ ನೇಮಕ ನೀಡಲಾಗಿದೆ’ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ರೈತ ಸಂಘ, ಕೂಲಿಕಾರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್ಎಫ್ಐನ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ್ ಮಾತನಾಡಿ,‘ತಾಲ್ಲೂಕಿನಲ್ಲಿ ರಾಜಕೀಯ ಪ್ರಾಬಲ್ಯದ ಕಾರಣಕ್ಕೆ ತುಗ್ಲೆಪ್ಪ ಕಾನೂನು ಬಾಹಿರವಾಗಿ ಅಧಿಕಾರ ಮಾಡುತ್ತಿದ್ದಾರೆ. ಈಗಾಗಲೇ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಎರಡು ಬಾರಿ ಅಮಾನತು ಆಗಿದ್ದಾರೆ. ತಪ್ಪಿತಸ್ಥರು ಎನ್ನುವ ಕಾರಣಕ್ಕೆ ಸರ್ಕಾರ ವಾರ್ಡನ್ ಹುದ್ದೆಯಿಂದ ಹಿಂಬಡ್ತಿ ನೀಡಿದೆ. ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡವಂತೆ ಆದೇಶ ಹೊರಡಿಸಲಾಗಿದೆ. ಇಂಥ ಅಧಿಕಾರಿಗೆ ತಾಲ್ಲೂಕಿನಲ್ಲಿ ಎರಡು ಇಲಾಖೆಯ ಪ್ರಮುಖ ಜವಾಬ್ದಾರಿ ಹುದ್ದೆ ನೀಡಿರುವುದು ಸರಿಯಲ್ಲ. ಕೂಡಲೇ ಹುದ್ದೆಯಿಂದ ಇವರನ್ನು ಬಿಡುಗಡೆಗೊಳಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಪ್ರಮುಖರಾದ ಸುಭಾನ್ ಸೈಯದ್, ಮಂಜುನಾಥ, ಶ್ರೀನಿವಾಸ, ಗ್ಯಾನೇಶ್ ಕಡಗದ್, ಹನುಮಂತ, ಬಸವರಾಜ, ಮಂಜಮ್ಮ, ಗಿರಿಜಾ, ಟಿಪ್ಪು ಸುಲ್ತಾನ್, ಶಿವಕುಮಾರ್ ನವಲಿ, ಶರಣಪ್ಪ, ಹುಲಿಗೆಮ್ಮ ಸೇರಿದಂತೆ ಹಲವರು ಇದ್ದರು.