ತಾವರಗೇರಾ: ಪ್ರತಿ ವರ್ಷದಂತೆ ಪಟ್ಟಣದ ಹಜರತ್ ಖ್ವಾಜಾ ಬಂದೇನವಾಜ್ ಗೇಸೂದರಾಜ್ ರಹಮುತುಲ್ಲಾ ಅಲೇಹಾ ಮತ್ತು ಶಾಮೀದ್ ಅಲಿ ದರ್ಗಾ ಉರುಸ್ ನಡೆಯಲಿದ್ದು, ಇದೇ ಜೂನ್ 15ರಂದು ಬುಧವಾರ ಗಂಧ, 16ರಂದು ಉರುಸ್, 17ರಂದು ಜಿಹಾರತ್ ಕಾರ್ಯಕ್ರಮ ಜರುಗಲಿದೆ.
ಸ್ಥಳೀಯ ದರ್ಗಾದ ಇತಿಹಾಸದ ಪುಟ ತಿರುವಿ ನೋಡಿದಾಗ, ಶರಣರು, ಸಂತರ ಪವಾಡಗಳು, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿರುವ ಘಟನೆಗಳು ಸಾಕಷ್ಟಿವೆ. ದರ್ಗಾದ ಧಾರ್ಮಿಕ ಆಚರಣೆಯ ಕಾರ್ಯಕ್ರಮಗಳು ಮತ್ತು ಎಲ್ಲಾ ಭಕ್ತರ ಸೇವೆಯಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವುದು ಮಾದರಿಯಾಗಿದೆ.
ಶ್ಯಾಮೀದ ಅಲಿ ದರ್ಗಾಕ್ಕೆ ಬಗದಾದ ಪಟ್ಟಣದಿಂದ ತಮ್ಮ ಮೂರು ಜನ ಶಿಷ್ಯರೊಂದಿಗೆ ಸಂತರು ಆಗಮಿಸಿದ್ದರು. ಅವರಲ್ಲಿ ಸಂತ ಸೈಯದ್ ಶಾಹ ಹಮೀದುದ್ದಿನ್ ಖಾದರಿ ಅವರು ಮಾತ್ರ ತಾವರಗೇರಿಯಲ್ಲಿ ನೆಲೆಸಿದರು. ಇವರ ದರ್ಶನಕ್ಕಾಗಿ ಗುಲಬುರ್ಗಾದಿಂದ ಶರಣರಾದ ಸೈಯ್ ಖಾಜಾ ಬಂದೆವನಾಜ್ ಗೇಸುದರಜ ರಹಮತುಲ್ಲಾ ಅಲೈಹ ಆಗಮಿಸಿ ದರ್ಶನ ಪಡೆದರು ಎಂಬುದು ಇತಿಹಾಸದ ಮೂಲಕ ತಿಳಿಯುತ್ತಿದೆ.
ಉರುಸ್ ಆರಂಭ: 1314ನೇ ಇಸ್ವಿಯಲ್ಲಿ ಪ್ರಥಮವಾಗಿ ಉರುಸು ಆಚರಣೆ ಆರಂಭಗೊಂಡಿತು. ಅಂದಿನಿಂದ ತಪ್ಪದೇ ಪ್ರತಿವರ್ಷ ನಡೆಯುತ್ತಿರುವ ಉರುಸು, ಜಾತಿ ಭೇದ ಮರೆತು ಎಲ್ಲಾ ವರ್ಗದವರ ಪಾಲ್ಗೊಳ್ಳುವಿಕೆಯಲ್ಲಿ 3 ದಿನಗಳವರೆಗೆ ನಡೆಯುತ್ತಿದೆ. ಸದ್ಯ ಸೈಯದ್ವಲಿಮ್ ಮುಜಾವರ ಮತ್ತು ಖಾಜಾಬಂಧೆನವಾಜ ದರ್ಗಾದಲ್ಲಿ ಶಾಮಿದಸಾಬ ಮುಜಾವರ ಸೇವೆ ಸಲ್ಲಿಸುತ್ತಿದ್ದಾರೆ.
ಹಿಂದೂ ಮುಸ್ಲಿಂ ಭಾವ್ಯಕ್ಯತೆ ಸಾರುವ ಈ ಉರುಸು ಇಲ್ಲಿವರೆಗೆ ಭಕ್ತಿಭಾವದಿಂದ ನಡೆಯುತ್ತಿದೆ. ಪಟ್ಟಣದಲ್ಲಿ ಶ್ಯಾಮೀದಸಾಬ, ಶ್ಯಾಮೀದ, ಶ್ಯಾಮಣ್ಣ, ಸಣ್ಣ ಶ್ಯಾಮಣ್ಣ, ಶ್ಯಾಮವ್ವ, ಶ್ಯಾಮೂರ್ತಿ ಎಂಬ ಹೆಸರುಗಳ ವ್ಯಕ್ತಿಗಳು ಎಲ್ಲಾ ಧರ್ಮಗಳಲ್ಲಿ ಕಾಣಬಹುದು.