ಕೊಪ್ಪಳ: ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸಿ, ಅಪಾರ ಶಿಷ್ಯ ಬಳಗವನ್ನು ಹೊಂದಿದ್ದ ಶರಣಬಸವರಾಜ ಬಿಸರಳ್ಳಿಅವರು ಅಪ್ಪಟ ಗಾಂಧಿವಾಗಿದ್ದರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ದಿ.ಶರಣಬಸವರಾಜ ಅವರಿಗೆ ತಾಲ್ಲೂಕಿನಬಿಸರಳ್ಳಿ ಗ್ರಾಮದಲ್ಲಿನಡೆದ ನುಡಿನಮನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೈದರಾಬಾದ್ ಕರ್ನಾಟಕ ಹೋರಾಟದಲ್ಲಿ ಸಿ.ಎಂ.ಚುರ್ಚಿಹಾಳ ಮಠ, ಅಳವಂಡಿ ಶಿವಮೂರ್ತಿಸ್ವಾಮಿ, ಹಿರೇಸಿಂದೋಗಿಯ ಯಲ್ಲಪ್ಪ ಮಾದಿ ನೂರ, ಕಾತರಕಿಯರ ಲಿಂಗನಗೌಡ್ರು ಹಿರೇಗೌಡ್ರು, ಬನ್ನಿಕೊಪ್ಪದ ಶಂಕ್ರಪ್ಪ ಯರಾಶಿಯವರ ಜೊತೆಯಲ್ಲಿ ಪಾಲ್ಗೊಂಡು ಈ ಭಾಗ ಹೈದರಾಬಾದ್ ನಿಜಾಮನಿಂದ ವಿಮೋಚನೆ ಪಡೆಯಲು ಶ್ರಮಿಸಿದರು. ಇವರಲ್ಲಿ ಅಹಂಕಾರದ ಗುಣವಿರಲಿಲ್ಲ. ಅತ್ಯಂತ ಸರಳ ಜೀವಿಗ ಳಾಗಿದ್ದರು. ಇವರು ದೇಶಕ್ಕಾಗಿ ತ್ಯಾಗ ಮಾಡಿ ಆದರ್ಶರಾಗಿದ್ದಾರೆ ಎಂದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹನುಮಂತಪ್ಪ ಅಂಡಗಿ ಮಾತನಾಡಿ,ನಾನು ಕೊಪ್ಪಳದ ಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ ಶರಣಬಸವರಾಜ ಬಿಸರಳ್ಳಿ ನನ್ನ ವಿದ್ಯಾಗುರುಗಳಾಗಿದ್ದರು. ಗಾಂಧೀಜಿಯವರ ಚಿತಾಭಸ್ಮ ತಂದು ಬಿಸರಳ್ಳಿಯಲ್ಲಿ ಗಾಂಧಿ ಕಟ್ಟೆಯನ್ನು ನಿರ್ಮಿಸಿ ಅವರ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ 60ನೇ ವಿವಾಹ ವಾರ್ಷಿಕೋತ್ಸದ ಸಂದರ್ಭದಲ್ಲಿ ನಾನು ಅವರನ್ನು ಕುರಿತು ‘ಶರಣ ಪಥಿಕ’ ಎಂಬ ಅಭಿನಂದನಾ ಗ್ರಂಥವನ್ನು ಹೊರತಂದಿದ್ದೇನೆ. ಸರ್ಕಾರ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ ಎಂದರು.
ಮುಖಂಡಎಚ್.ಎಲ್.ಹಿರೇಗೌಡರ ಮಾತನಾಡಿ, ಬಿಸರಳ್ಳಿಯವರು ನಮ್ಮ ತಂದೆಯ ವರಾದ ಲಿಂಗನಗೌಡ್ರ ಹಿರೇಗೌಡ್ರ ಅವರ ಒಡನಾಡಿಯಾಗಿದ್ದರು. ಇವರು ಬಿಸರಳ್ಳಿಯ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದರು. ಬಿಸರಳ್ಳಿಯನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಪಣತೊಟ್ಟಿದ್ದ ಪುಣ್ಯತ್ಮರು ಎಂದರು.
ಮುದಿಯಪ್ಪ ಕವಲೂರು ಅಧ್ಯಕ್ಷತೆ ವಹಿಸಿದ್ದರು. ಡಾ.ಆರ್.ಎಂ.ಪಾಟೀಲ, ಚಂದ್ರಾಮಪ್ಪ ಕಣಕಾಲ, ಅಂದಪ್ಪ ಶಿಳ್ಳಿನ, ಬಾಳನಗೌಡ್ರು ಪೋಲೀಸ್ ಪಾಟೀಲ, ಪ್ರಕಾಶ ಕೊಪ್ಪದ, ವೀರಭದ್ರಪ್ಪ ವಿಭೂತಿ, ವಿರೂಪಾಕ್ಷಪ್ಪ ಹದ್ಲಿ, ಸಂಗಮೇಶ ಹದ್ಲಿ, ಶಿವಾನಂದ ಹದ್ಲಿ, ಕಲ್ಯಾಣಕುಮಾರ ಹದ್ಲಿ ಇದ್ದರು.
ಗವಿಸಿದ್ಧಪ್ಪ ಕೊನಸಾಗರ ನಿರೂಪಿಸಿದರು. ಜಗದೀಶ ಶಿಳ್ಳಿನ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.