ಕೊಪ್ಪಳ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದ ಕುರಿತ ಪ್ರಚಾರದ ಪೋಸ್ಟರ್ನಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಅವರ ಫೋಟೊ ಕೈ ಬಿಡಲಾಗಿದೆ.
ಇದು ಜಿಲ್ಲೆಯ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ.
ಪೋಸ್ಟರ್ ಅನ್ನು ನಗರದ ಕೆಲ ಬಡಾವಣೆಗಳ ಮನೆಮನೆಗೆ ಅಂಟಿಸಲಾಗಿದೆ. ಪೋಸ್ಟರ್ನಲ್ಲಿ ಸಿದ್ದರಾಮಯ್ಯ, ಶಾಸಕ ರಾಘವೇಂದ್ರ್ ಹಿಟ್ನಾಳ್, ಅವರ ಸಹೋದರ ರಾಜಶೇಖರ ಹಿಟ್ನಾಳ್, ಮಾಜಿ ಸಚಿವ ಬಸವರಾಜ ರಾಯರಡ್ಡಿ ಫೊಟೊ ಇವೆ. ಜತೆಗೆ ರಾಜಶೇಖರ ಹಿಟ್ನಾಳ್ ಪತ್ನಿ ಫೋಟೊ ಕೂಡ ಹಾಕಲಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿವರಾಜ ತಂಗಡಗಿ ‘ಯಾರೊ ಒಬ್ಬ ವೈಯಕ್ತಿಕ ಅನುಕೂಲಕ್ಕಾಗಿ ಪೋಸ್ಟರ್ ಅಂಟಿಸಿ ನನ್ನ ಫೋಟೊ ಕೈ ಬಿಟ್ಟಿದ್ದಕ್ಕೆ ನಾನು ಏಕೆ ತಲೆಕೆಡಿಸಿಕೊಳ್ಳಬೇಕು. ಪಕ್ಷದಿಂದ ಎಲ್ಲಿಯೂ ಪೋಸ್ಟರ್ ಅಂಟಿಸಿಲ್ಲ; ಹೀಗಾಗಿ ಇದರ ಬಗ್ಗೆ ಯೋಚಿಸುವ ಅಗತ್ಯವೂ ಇಲ್ಲ’ ಎಂದರು.