ಗಂಗಾವತಿ: ‘ಐಟಿಐ ವ್ಯಾಸಂಗ ಮಾಡುತ್ತಿರುವ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು’ ಎಂದು ಆಗ್ರಹಿಸಿ ಮಂಗಳವಾರ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ಪ್ರತಿಭಟನೆ ನಡೆಸಿತು.
ಸಂಘಟನೆಯ ಜಿಲ್ಲಾ ಸಮಿತಿ ಕಾರ್ಯದರ್ಶಿ ಶರಣು ಗಡ್ಡಿ ಮಾತನಾಡಿ,‘ಕೋವಿಡ್ ಹಿನ್ನೆಲೆಯಲ್ಲಿ ಐಟಿಐ ವಿದ್ಯಾರ್ಥಿಗಳು ಸುಮಾರು 10 ತಿಂಗಳು ತರಬೇತಿ ಯಿಂದ ವಂಚಿತರಾಗಿದ್ದಾರೆ. ಹಾಗಾಗಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ನವದೆಹಲಿಯ ಡೈರಕ್ಟರ್ ಜನರಲ್ ಆಫ್ ಟ್ರೈನಿಂಗ್ ಅವರು ಆದೇಶ ಹೊರಡಿದ್ದಾರೆ. ಆದರೆ, ಮಾರ್ಚ್ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಕೈಗಾರಿಕಾ ತರಬೇತಿ ಹಾಗೂ ಉದ್ಯೋಗ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಫೆ.17 ರ ಒಳಗಾಗಿ ಪರೀಕ್ಷಾ ಶುಲ್ಕ ಪಾವತಿಸಬೇಕು ಎಂದು ಆದೇಶ ನೀಡಿದ್ದಾರೆ’ ಎಂದು ತಿಳಿಸಿದರು.
‘ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಗೆ ಕನಿಷ್ಠ ಕಾಲಾವಕಾಶ ನೀಡದಿರುವುದು ಅಸಮಂಜಸ. ಕನಿಷ್ಠ 10-15 ದಿನಗಳ ಕಾಲಾವಕಾಶ ನೀಡಬೇಕಿತ್ತು ಎನ್ನುವುದು ಪೋಷಕರ ಅಭಿಪ್ರಾಯ. ಇದರಿಂದ ತಕ್ಷಣಕ್ಕೆ ಶುಲ್ಕ ಪಾವತಿ ಮಾಡಲು ಸಾಧ್ಯವಾಗದ ವಿದ್ಯಾರ್ಥಿಗಳು ತರಬೇತಿ ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಹಾಗಾಗಿ ಆಯುಕ್ತರು ಕೂಡಲೇ ಈ ಗೊಂದಲ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಯ ಪ್ರಮುಖ ಫಯಾಜ್, ವಿದ್ಯಾರ್ಥಿಗಳಾದ ಅಖಿಲಕುಮಾರ್, ಈಶಪ್ಪ, ಪ್ರಜ್ವಲ್, ಅಭಿಷೇಕ, ಚನ್ನಣ್ಣ, ಮಂಜುನಾಥ, ಬಸವರಾಜ, ನಾಗರಾಜ ಹಾಗೂ ಮಹೇಶ ಇದ್ದರು.