ಯಲಬುರ್ಗಾ: ತಾಲ್ಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪರಿಷತ್ತಿನ ಅಧ್ಯಕ್ಷ ಹನಮಂತಪ್ಪ ಉಪ್ಪಾರ ಮಾತನಾಡಿ, ಮಕ್ಕಳಲ್ಲಿ ವ್ಯಕ್ತಿತ್ವ ವಿಕಾಸಗೊಳ್ಳುವಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲದೇ ಕಲಿಕಾ ಸಾಮರ್ಥ್ಯ ವೃದ್ಧಿಗೊಳಿಸುವ ಇಂಥ ಚಟುವ ಟಿಕೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸ್ವಾಮಿ ವಿವೇಕಾನಂದರ ಪ್ರತಿಯೊಂದು ವಿಚಾರಗಳು ನಮಗೆ ಆದರ್ಶವಾಗಬೇಕಾಗಿದೆಎಂದು ಮಕ್ಕಳಿಗೆ ಸಲಹೆ ನೀಡಿದರು.
ಬಿಆರ್ಸಿ ಶಿವಪ್ಪ ಉಪ್ಪಾರ ಮಾತನಾಡಿ, ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ರೂಢಿಸಿ ಕೊಳ್ಳಬೇಕಾಗಿದೆ. ಮಾನವೀಯ ಗುಣಗಳು, ಅಧ್ಯಯನಶೀಲತೆ ಮತ್ತು ಕ್ರೀಯಾಶೀಲತೆ ರೂಢಿಸಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕುಕನೂರು ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕಲ್ಲಪ್ಪ ಕವಳಕೇರಿ ಮಾತನಾಡಿ, ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ. ಕೀಳರಿಮೆ ಬಿಟ್ಟು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಂಡರೆ ಯಶಸ್ಸು ನಿಶ್ಚಿತ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಪರಶುರಾಮ ತಳವಾರ್, ಶಿಕ್ಷಕಿ ಯಶೋಧ, ಮಾಂತೇಶ್ ಹಿರೇಮಠ ಮಾತನಾಡಿದರು. ಸುರೇಶ್ ಮಡಿವಾಳರ, ಶರಣಪ್ಪ ಹಾಳಕೇರಿ ಹನುಮಪ್ಪ ಹಳ್ಳಿ, ಕುಮಾರ್, ಅಮೃತಬಾಯಿ ಹಿರೇಮಠ, ಹೇಮಲತಾ, ಕಾವ್ಯ ಹಾಗೂ ನಂದಿನಿ ಇದ್ದರು.