ಕೊಪ್ಪಳ: ‘ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾಡುತ್ತಿರುವ ಜನಪರ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ. ಅವರು ನಮ್ಮ ನಾಡಿನ ಭಾಗ್ಯ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಗವಿಮಠಕ್ಕೆ ಸೋಮವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಬಡ ಮಕ್ಕಳಿಗೆ ಉಚಿತ ಊಟ ಹಾಗೂ ವಸತಿ ನಿಲಯ ನಿರ್ಮಾಣ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಸ್ವಾಮೀಜಿಯ ದೊಡ್ಡ ಸೇವೆ ಈ ಭಾಗದ ಬಡವರಿಗೆ ನಂದಾದೀಪವಾಗಿದೆ’ ಎಂದರು.
‘ಸ್ವಾಮೀಜಿ 8ರಿಂದ 10 ಸಾವಿರ ಮಕ್ಕಳಿಗೆ ವಸತಿ ನಿಲಯ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಹಿಂದುಳಿದ ಭಾಗದ ಬಡ ಮಕ್ಕಳ ಪಾಲಿಗೆ ಆಶಾಕಿರಣವಾಗಿದ್ದಾರೆ. ಸರ್ಕಾರ ಮತ್ತು ಸಮಾಜ ಮಾಡುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಅವರ ಎಲ್ಲಾ ಆಸೆ ಮತ್ತು ಕನಸು ಈಡೇರುತ್ತದೆ’ ಎಂದರು..
ಗವಿಮಠದಲ್ಲಿ ಉಚಿತ ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರ ₹10 ಕೋಟಿ ಘೋಷಿಸಿತ್ತು. ಇದಕ್ಕೆ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಅದರ ಪ್ರತಿಯನ್ನು ಮುಖ್ಯಮಂತ್ರಿ ಸ್ವಾಮೀಜಿಗೆ ನೀಡಿದರು.