ತಾವರಗೇರಾ: ಪಟ್ಟಣದ ಕುಷ್ಟಗಿ ರಾಜ್ಯ ಹೆದ್ದಾರಿ, ತಾವರಗೇರಾ–ಗಂಗಾವತಿ, ಸಿಂಧನೂರು, ಲಿಂಗಸುಗೂರು ಸಂಪರ್ಕಿಸುವ ರಸ್ತೆಗಳಲ್ಲಿ ಅಪಘಾತಗಳೂ ಹೆಚ್ಚುತ್ತಿವೆ.
ಅಪಘಾತ ವಲಯಗಳಲ್ಲಿ ಹಾಕಲಾಗಿರುವ ಸೂಚನಾ ಫಲಕಗಳು ಮುರಿದು ಬಿದ್ದಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ.
ಮುಖ್ಯ ರಸ್ತೆಗಳ ಅಕ್ಕ-ಪಕ್ಕದಲ್ಲಿ ಹಾಕಿರುವ ಸೂಚನಾ ಫಲಕಗಳು ಹಾಳಾಗಿ ತುಂಬಾ ದಿನಗಳಾಗಿವೆ. ಕೆಲ ಕಡೆ ಕಲ್ಲಿನ ಫಲಕಗ ಳು ಹಾಳಾಗಿ ಕಬ್ಬಿಣದ ಸರಳುಗಳು ತೇಲಿವೆ. ಮೈಲುಗಲ್ಲು, ಕಿ.ಮೀ ಕಲ್ಲುಗಳ ಸಹ ದುಸ್ತಿತಿಯಲ್ಲಿವೆ. ಹಾಳಾಗಿರುವ ಫಲಕಗಳು ಚಾಲಕರು ಹಾಗೂ ಪ್ರಯಾಣಿಕರ ಕಣ್ಣಿಗೆ ಕಾಣದ ಕಾರಣ ಅಪಘಾತಗಳು ಸಂಭವಿಸಿದ ಉದಾಹರಣೆಗಳೂ ಇವೆ. ಇದರಿಂದಾಗಿ ಕೆಲವರು ರಾತ್ರಿ ವೇಳೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ.
ತಾವರಗೇರಾ–ಗಂಗಾವತಿ ರಾಜ್ಯ ಹೆದ್ದಾರಿಯ ಮೆಣೇಧಾಳದ ಬಳಿ ನೂತನ ಸೇತುವೆ ಪಕ್ಕದಲ್ಲಿ ಹೊಂದಿಸಿರುವ ಬಂಡೆಗಳು ಮತ್ತು ರಕ್ಷಣಾ ಕಂಬಿ ಕಿತ್ತು ಹೋಗಿದೆ.
ದೂರದಲ್ಲಿ ಬರುವ ಸವಾರರಿಗೆ ಈ ಕಲ್ಲು ಕಿತ್ತಿರುವುದು ಕಾಣಿಸುವುದಿಲ್ಲ. ರಸ್ತೆ ಪಕ್ಕ ವೇಗವಾಗಿ ವಾಹನ ಬಂದರೆ ಸವಾರರು ಹಾಗೂ ಚಾಲಕರಿಗೆ ಅಪಾಯ ಕಟ್ಟಿಟ್ಟ ಬುತ್ತಿ.
‘ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಾಜ್ಯ ಹೆದ್ದಾರಿ, ಮುಖ್ಯ ರಸ್ತೆ, ಸಂಪರ್ಕ ರಸ್ತೆಗಳು ಹಾಗೂ ಗ್ರಾಮೀಣ ರಸ್ತೆಗಳ ಪಕ್ಕದಲ್ಲಿ ಅಳವಡಿಸಿರುವ ಸೂಚನಾ ಫಲಕಗಳನ್ನು ಪರಿಶೀಲಿಸಿ, ಅವುಗಳನ್ನು ಬದಲಿಸಬೇಕು. ಜನರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಸಮಾಜ ಸೇವಕ ಶ್ಯಾಮ್ ಬಂಗಿ ಒತ್ತಾಯಿಸುತ್ತಾರೆ.