ಯಲಬುರ್ತಿ (ಕುಷ್ಟಗಿ): ‘ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಮೂಲಕ ಸಶಕ್ತ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುವುದರಲ್ಲಿ ಸಂದೇಹವಿಲ್ಲ’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ತಾಲ್ಲೂಕಿನ ಯಲಬುರ್ತಿ ಗ್ರಾಮದ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ಗುರು ವಂದನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಜ್ಞಾನಾರ್ಜನೆ ನೀಡುವುದು, ಕಲೆ, ಸಾಹಿತ್ಯ, ಸಂಸ್ಕೃತಿಯ ಕುರಿತು ಮನವರಿಕೆ ಮಾಡುವುದು. ಕೌಶಲ, ಕ್ರಿಯಾಶೀಲತೆಯನ್ನು ಬೆಳೆಸುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ ಆಗಾಗ್ಗೆ ಕಲುಷಿತಗೊಳ್ಳುವ ಸಮಾಜವನ್ನು ಸುಧಾರಿಸುವ ಮಾರ್ಗ ತೆರೆದುಕೊಳ್ಳುತ್ತದೆ. ಸಮಾಜಕ್ಕೆ ಇಂಥ ಅಮೂಲ್ಯ ಕೊಡುಗೆ ನೀಡುವ ಅವಕಾಶ ಶಿಕ್ಷಕರಿಗೆ ಮಾತ್ರ ಇರುತ್ತದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಶಿಕ್ಷಕರು ಸದಾ ಅಧ್ಯಯನಶೀಲರಾಗಿ ಇರಬೇಕಾಗುತ್ತದೆ. ಆದರೆ ಶಿಕ್ಷಕರು ಓದುವ ಸಂಸ್ಕೃತಿಯಿಂದ ವಿಮುಖಗೊ ಳ್ಳುತ್ತಿರುವುದು ಕಂಡುಬರುತ್ತಿದೆ ಎಂದು ವಿಷಾದಿಸಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೀವನಸಾಬ್ ಬಿನ್ನಾಳ ಮಾತನಾಡಿ,‘ಶಿಕ್ಷಕರ ಮೇಲೆ ಸಮಾಜ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಗುರುಪರಂಪರೆಯ ಘನತೆ, ಗೌರವಗಳನ್ನು ಎತ್ತಿಹಿಡಿಯುವ ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕಲಿಸಿದ ಗುರುಗಳನ್ನು ಮರೆಯದೆ ಗೌರವಿಸುವ ಮೂಲಕ ಹಳೆ ವಿದ್ಯಾರ್ಥಿಗಳು ಭಾರತೀಯ ಗುರುಪರಂಪರೆಯನ್ನು ಮುಂದುವರೆಸಿರುವುದು ಹೆಮ್ಮೆಯ ಸಂಗತಿ’ ಎಂದು ಅವರು ಹೇಳಿದರು.
ಬಿಆರ್ಪಿ ಶರಣಪ್ಪ ತೆಮ್ಮಿನಾಳ, ನಿಂಗರಾಜ ತಟ್ಟಿ ಇತರರು ಕಾರ್ಯಕ್ರಮದ ಕುರಿತು ಅನಿಸಿಕೆ ಹಂಚಿಕೊಂಡರು.
ಈ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಬೇರೆ ಬೇರೆ ಕರ್ತವ್ಯದಲ್ಲಿರುವ ಸುಮಾರು 25ಕ್ಕೂ ಹೆಚ್ಚು ಶಿಕ್ಷಕರನ್ನು ಹಳೆ ವಿದ್ಯಾರ್ಥಿ ವೃಂದದ ಪರವಾಗಿ ನ್ಯಾ.ಅರಳಿ ನಾಗರಾಜ ಸತ್ಕರಿಸಿದರು.
ಸನ್ಮಾನಿತ ಶಿಕ್ಷಕರಾದ ಅಲ್ಲಾಸಾಬ್ ಚಿಕ್ಕಮ್ಯಾಗೇರಿ, ಶರಣಮ್ಮ ಪೆದ್ದಿ ಶಿಕ್ಷಕ ವೃತ್ತಿ ಪಾವಿತ್ರ್ಯತೆ ಕುರಿತು ಮಾತನಾಡಿ,‘ವಿದ್ಯಾರ್ಥಿ ಗಳು, ಗ್ರಾಮಸ್ಥರು ನೀಡಿದ ಸನ್ಮಾನ ನಮ್ಮ ಕರ್ತವ್ಯ ಪ್ರಜ್ಞೆ ಮತ್ತು ಬದ್ಧತೆಯನ್ನು ಹೆಚ್ಚಿಸುವಂತೆ ಮಾಡಿದೆ’ ಎಂದು ಅವರು ಹೇಳಿದರು.
ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಿದ್ದಯ್ಯ ಗುರುವಿನ ಅಧ್ಯಕ್ಷತೆ ವಹಿಸಿದ್ದರು.
ಶರಣಪ್ಪ ತೆಮ್ಮಿನಾಳ ನಿರೂಪಿಸಿದರು.
ಸುರೇಶ ಗೋಗೇರಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಗ್ರಾಮದ ಹಿರಿಯರು, ಹಳೆ ವಿದ್ಯಾರ್ಥಿಗಳು, ಮಕ್ಕಳು, ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
‘ಶಿಕ್ಷಕ ವೃತ್ತಿ ಶ್ರೇಷ್ಠ’
ಹನುಮಸಾಗರ: ‘ವಿದ್ಯಾರ್ಥಿಗಳಲ್ಲಿ ನೈತಿಕತೆ, ಮಾನವೀಯತೆ ಹಾಗೂ ದೇಶ ಭಕ್ತಿಯ ಮೌಲ್ಯಗಳನ್ನು ತುಂಬಿ ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ರಾಜ್ಯ ಹೈಕೋರ್ಟ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.
ಇಲ್ಲಿನ ನಿಸರ್ಗ ಸಂಗೀತ ಶಾಲೆಯಲ್ಲಿ ನಾಡೋಜ ಡಾ.ಮಹೇಶ ಜೋಶಿ ಅಭಿಮಾನಿಗಳ ಬಳಗ ಹಾಗೂ ಕುಷ್ಟಗಿಯ ಸಮೃದ್ಧಿ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಶಿಕ್ಷಕ ವೃತ್ತಿ ಅತಿ ಶ್ರೇಷ್ಠವಾದ ನೈತಿಕತೆಯ ವೃತ್ತಿಯಾಗಿದೆ. ಅನಾದಿ ಕಾಲದಿಂದಲೂ ಸಮಾಜದಲ್ಲಿ ಗುರುವಿಗೆ ಆಗ್ರಸ್ಥಾನವಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹೇಳಿದರು.
ಸಮೃದ್ಧಿ ಸಂಸ್ಥೆಯ ಕಾರ್ಯದರ್ಶಿ ನಬಿಸಾಬ ಕುಷ್ಟಗಿ ಮಾತನಾಡಿದರು.
ನುಲಿಯ ಚಂದಯ್ಯ ಕೊರಮ ಸಂಘದ ಅಧ್ಯಕ್ಷ ಮುತ್ತಣ್ಣ ಭಜಂತ್ರಿ ಹಾಗೂ ಸಮಾಜದ ಹಿರಿಯರು ನಿವೃತ್ತ ನಾಯಾಧೀಶರನ್ನು ಸನ್ಮಾನಿಸಿದರು.
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಯ್ಯ ಕೋಮಾರಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವೀರಣ್ಣ ನಿಂಗೊಜಿ, ಪ್ರಮುಖರಾದ ಬಸವರಾಜ ಚಿನಿವಾಲರ, ಚಂದಪ್ಪ ಹಕ್ಕಿ, ಸಂಗಮೇಶ ಬ್ಯಾಳಿ, ಸುನೀಲ ಬಸುದೆ, ಅಮರೇಶ ತಮ್ಮಣ್ಣವರ, ಸುರೇಶ ಜಮಖಂಡಿಕರ, ಮಹಾಂತೇಶ ಚೌಡಾಪುರ, ಮುತ್ತಣ್ಣ ಭಜಂತ್ರಿ, ದುರುಗೇಶ ಭಜಂತ್ರಿ ಹಾಗೂ ವೆಂಕಟೇಶ ಭಜಂತ್ರಿ ಇದ್ದರು. ಅಮರೇಶ ತಮ್ಮಣ್ಣವರ ಸ್ವಾಗತಿಸಿದರು. ಮಹಾಂತೇಶ ಚೌಡಾಪೂರ ಕಾರ್ಯಕ್ರಮ ನಿರೂಪಿಸಿದರು. ಸಂಗಮೇಶ ಬ್ಯಾಳಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.