ಕುಷ್ಟಗಿ: ಪಟ್ಟಣದ ರಾಜಸ್ತಾನ ಮೂಲದ ಕಿರಾಣಿ ವರ್ತಕನಿಗೆ ಸೇರಿದ್ದು ಎನ್ನಲಾದ ಹಣದ ಚೀಲವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಬೆನ್ನಟ್ಟಿ ಹಿಡಿದ ಘಟನೆ ಶನಿವಾರ ಸಂಜೆ ಪಟ್ಟಣದಲ್ಲಿ ನಡೆದಿದೆ.
ಬಸ್ ನಿಲ್ದಾಣದ ಬಳಿ ಬರುತ್ತಿದ್ದಾಗ ಏಕಾಏಕಿ ಹಣ ಇದ್ದ ಬ್ಯಾಗ್ ಎಗರಿಸಿದ ಕಳ್ಳ ಓಡುತ್ತಿದ್ದಂತೆ ವರ್ತಕ ಕೂಗಿಕೊಂಡಿದ್ದಾರೆ.
ಸಾರಿಗೆ ಸಂಸ್ಥೆ ಚಾಲಕ ಮಲ್ಲಪ್ಪ ಮತ್ತಿತರರು ಬೆನ್ನಟ್ಟಿ ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ನಂತರ ಹಣದ ಚೀಲ ಸಹಿತ ಕಳ್ಳನನ್ನು ಸುರಕ್ಷಿತವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಬ್ ಇನ್ಸ್ಪೆಕ್ಟರ್ ತಿಮ್ಮಣ್ಣ ನಾಯಕ,‘ಹಣದ ಚೀಲ ಅಪಹರಿಸಿದ್ದ ಎನ್ನಲಾದ ವ್ಯಕ್ತಿಯೊಬ್ಬನನ್ನು ಜನರು ಹಿಡಿದುಕೊಟ್ಟಿದ್ದು ಆತನ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಹೇಳಿದರು.
‘ವಿಚಾರಣೆ ವೇಳೆ ಈ ವ್ಯಕ್ತಿ ಹುಬ್ಬಳಿ ಮೂಲದವ ಎಂದು ತಿಳಿದುಬಂದಿದೆ’ ಎಂದು ಹೇಳಿದರು.