ಕುಕನೂರು: ತಾಲ್ಲೂಕಿನ ಗುದ್ಲೆಪ್ಪನಮಠ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸಂಬಂಧಿಸಿದ 30 ಎಕರೆ ಭೂಮಿಯಲ್ಲಿ ತಹಶೀಲ್ದಾರ್ ಕಾರ್ಯಾಲಯ ಹಾಗೂ ತಾಲ್ಲೂಕು ನ್ಯಾಯಾಲಯ ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಆದರೆ ಅದನ್ನು ಗ್ರಾಮಸ್ಥರು ವಿರೋಧಿಸುತ್ತಿದ್ದಾರೆ.
ಗ್ರಾಮದಲ್ಲಿ ಶನಿವಾರ ತಹಶೀಲ್ದಾರ್ ಕಾರ್ಯಾಲಯಕ್ಕಾಗಿ ಶಾಸಕ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ಸ್ಥಳ ಪರಿಶೀಲಿಸಿದರು.
‘ಬಹಳ ಜನಗಳ ಹಿಂದಿಯಿಂದಲೂ ನಮ್ಮ ಗ್ರಾಮದ ಜಾಗವನ್ನು ವಿವಿಧ ಸರ್ಕಾರಿ ಕಟ್ಟಡಗಳಿಗಾಗಿ ಬಳಸುತ್ತಿದ್ದು, ನಮ್ಮ ಮನೆ ನಿರ್ಮಾಣಕ್ಕೆ ಜಾಗವಿಲ್ಲ. ಉಳಿದ ಈ ಜಾಗವನ್ನು ನೀವು ಸರ್ಕಾರಿ ಕಟ್ಟಡಗಳಿಗೆ ಬಳಸಿದರೆ ನಮಗೆ ಸ್ಮಶಾನ ಜಾಗಕ್ಕಾಗಿ ಹಾಗೂ ನಿರಾಶ್ರಿತರಿಗಾಗಿ ಮನೆ ನಿರ್ಮಿಸಲು ಜಾಗವಿರುವುದಿಲ್ಲ. ಆದ್ದರಿಂದ ದಯವಿಟ್ಟು ಈ ಜಾಗದ ವೀಕ್ಷಣೆ ನಿಲ್ಲಿಸಬೇಕು’ ಎಂದು ಸ್ಥಳೀಯರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ‘ಗ್ರಾಮಸ್ಥರು ನೀಡಿದ ಮನವಿಯನ್ನು ಪರಿಶೀಲಿಸಿ ಮುಂದಿನ ತೀರ್ಮಾನ ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಲಾಗುವುದು’ ಎಂದರು.
ಶಾಸಕ ಬಸವರಾಜ ರಾಯರಡ್ಡಿ ಮಾತನಾಡಿ, ‘ಸರ್ಕಾರದ ಮಟ್ಟದಲ್ಲಿ ಈ ವಿಷಯವನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವರು’ ಎಂದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಜವಾಹರ್ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿದ ಶಾಸಕ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾಧಿಕಾರಿ ನಲಿನ್ ಅತುಲ್ ವಿದ್ಯಾಲಯದ ಮೂಲಸೌಕರ್ಯ ಹಾಗೂ ಹಳೆಯ ಕಟ್ಟಡದ ಕುರಿತು ಪ್ರಾಚಾರ್ಯರೊಂದಿಗೆ ಚರ್ಚಿಸಿದರು.
ಕಾವ್ಯರಾಣಿ, ಪಿಡಬ್ಲ್ಯೂಡಿ ಇಲಾಖೆಯ ಜಿಲ್ಲಾ ನಿರ್ದೇಶಕ ಹೇಮಂತ್ ರಾಜ್, ತಹಶೀಲ್ದಾರ್ ಪ್ರಾಣೇಶ್ ಎಚ್. ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.