ಹನುಮಸಾಗರ: ಸಮೀಪದ ಅಡವಿಭಾವಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಸಿಡಿಲು ಸಹಿತ ಮಳೆಗೆ ತೋಟದ ಮನೆಯ ಗೋಡೆ ಕುಸಿದು ಅದರಲ್ಲಿ ಮಲಗಿದ್ದ ರೈತ ಅಮರೇಶ ಕುಷ್ಟಗಿ ಗಾಯಂಗೊಂಡಿದ್ದಾರೆ.
ಚಿಕಿತ್ಸೆ ನೀಡಲಾಗಿದೆಯಾದರೂ ಸಿಡಿಲಿನ ಆರ್ಭಟಕ್ಕೆ ಹೌಹಾರಿದ ಅವರು ಇನ್ನೂ ಚೇತರಿಸಿಕೊಂಡಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ರೈತನ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದರು. ಪರಿಹಾರ ಕೊಡಿಸುವ ಭರವಸೆ ನೀಡಿದರು.
ಸಂಜೆ ಬೀಸಿದ ಬಿರುಗಾಳಿಗೆ ಗೊಣ್ಣಾಗರ ಗಡಚಿಂತಿ, ಅಡವಿಭಾವಿ ಗ್ರಾಮಗಳಲ್ಲಿ ಕೆಲ ಮನೆಗಳ ಹೆಂಚುಗಳು ಹಾರಿ ಹೋಗಿವೆ. ಕೊಯ್ಲಿಗೆ ಬಂದಿದ್ದ ಮಾವಿನ ಫಸಲು ನೆಲಕ್ಕೆ ಉದುರಿದ್ದು, ರೈತರಿಗೆ ನಷ್ಟವಾಗಿದೆ.
ಅಲ್ಲಲ್ಲಿ ವಿದ್ಯುತ್ ತಂತಿಗಳು ಕತ್ತರಿಸಿ ಬಿದ್ದ ಕಾರಣ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ನಿಲೋಗಲ್ ಭಾಗದಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಿ ನಿರ್ಮಿಸಲಾಗಿರುವ ಕಟ್ಟೆಗಳಲ್ಲಿ ನೀರು ಸಂಗ್ರಹವಾಗಿದೆ.
ಶುಕ್ರವಾರ ಸುರಿದ ಭಾರಿ ಮಳೆ ರೈತರ ಸಂತಸಕ್ಕೆ ಕಾರಣವಾಗಿದೆ. ಬಿತ್ತನೆಗೆ ಭೂಮಿಯನ್ನು ಹದ ಮಾಡಿಕೊಳ್ಳಲಾಗುತ್ತಿದೆ.