ಕನಕಗಿರಿ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಭರದಿಂದ ನಡೆದಿದ್ದು, ತಹಶೀಲ್ದಾರ್ ರವಿ ಅಂಗಡಿ ಅವರು ಭಾನುವಾರ ವಿವಿಧ ಮತಗಟ್ಟೆಗಳಿಗೆ ಹಠಾತ್ ಭೇಟಿ ನೀಡಿದರು.
ಪಟ್ಟಣ ಪಂಚಾಯಿತಿ, ತಹಶೀಲ್ದಾರ್, ಉಪ ತಹಶೀಲ್ದಾರ್ ಕಚೇರಿಗಳಿಗೆ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ನಂತರ ಮಾತನಾಡಿದ ರವಿ,‘18 ವರ್ಷ ತುಂಬಿದ ಯುವ ಮತದಾರರರು ಸೂಕ್ತ ದಾಖಲೆ ನೀಡಿ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕು. ಚುನಾವಣಾ ಗುರುತಿನ ಚೀಟಿಗಳಲ್ಲಿ ತಪ್ಪುಗಳು ಕಂಡು ಬಂದಿದ್ದರೆ ತಿದ್ದುಪಡಿಗೂ ಅವಕಾಶ ಇದೆ. ಮೃತರಾದವರ ಹೆಸರುಗಳನ್ನು ತೆಗೆದು ಹಾಕಲಾಗುವುದು’ ಎಂದು ತಿಳಿಸಿದರು.
ಕಂದಾಯ ನಿರೀಕ್ಷಕ ಸೈಯದ್ ಬಷಿರುದ್ದೀನ್, ಆಹಾರ ನಿರೀಕ್ಷಕ ಗಯಾಸುದ್ದೀನ್, ಚುನಾವಣಾ ವಿಭಾಗದ ಸೋಮನಾಥ, ಗುರುಲಿಂಗ, ಬೂತ್ ಮಟ್ಟದ ಅಧಿಕಾರಿಗಳಾದ ಶಾಮೀದಸಾಬ ಲೈನದಾರ ಹಾಗೂ ರವೀಂದ್ರ ಬೋಂದಾಡೆ ಇದ್ದರು.