ಅಳವಂಡಿ (ನೆಲೋಗಿಪುರ): ಸಮೀಪದ ನೆಲೋಗಿಪುರ ಗ್ರಾಮದಿಂದತುಂಗಾಭದ್ರಾ ನದಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ನಿಂತು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಗ್ರಾಮದಿಂದ ತುಂಗಾಭದ್ರಾ ನದಿ, ಕೊಪ್ಪಳ, ಕುಕನೂರು ತಾಲ್ಲೂಕಿನ ಹಳ್ಳಿಗಳು ಹಾಗೂ ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಘಟಕ. ಅಲ್ಲದೆ, ರೈತರ ಜಮೀನುಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಜನ ಈ ರಸ್ತೆಯಲ್ಲಿ ಸಂಚರಿಸಲು ಹರ ಸಾಹಸ ಪಡಬೇಕಾಗಿದೆ.
ರಸ್ತೆ ಮೇಲೆ ನೀರು ಸಂಗ್ರಹವಾಗಿ ದುರ್ನಾತ ಬೀರುತ್ತಿದೆ. ರೋಗ ಭೀತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಸ್ಥಳೀಯರು ತಿಳಿಸಿದರು.
ಆದಷ್ಟು ಬೇಗ ನೀರು ತೆರವು ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ನೆಲೋಗಿಪುರ ನಿವಾಸಿ ಹನುಮೇಶ ಒತ್ತಾಯಿಸಿದರು.