ದುರಗಮ್ಮ ದೇವಸ್ಥಾನದ ಹಿಂಭಾಗದಲ್ಲಿ ನಾಲ್ಕು ತಿಂಗಳ ಹಿಂದೆ ಕೊಳವೆಬಾವಿ ಕೊರೆಸಲಾಗಿದೆ. ಆದರೆ ಈವರೆಗೆ ಅದಕ್ಕೆ ಪೈಪ್ಲೈನ್ ಜೋಡಣೆ ಮಾಡಿಲ್ಲ. ಕನಿಷ್ಠ ಪಕ್ಷ ಈ ಕೊಳವೆಬಾವಿಗೆ ವ್ಯವಸ್ಥಿತಿವಾಗಿ ಪೈಪ್ಲೈನ್ ಮಾಡಿದರೆ ಉಪ್ಪು ನೀರಾದರೂ ನಮಗೆ ಸರಿಯಾಗಿ ದಕ್ಕುತ್ತದೆ. ಆ ಕೆಲಸವನ್ನೂ ಮಾಡುತ್ತಿಲ್ಲ. ಈ ಬಾರಿ ಉತ್ತಮ ಮಳೆಯಾಗಿ ಕೆರೆಕಟ್ಟೆಗಳೆಲ್ಲ ತುಂಬಿದ್ದರೂ ನಮ್ಮ ಭಾಗಕ್ಕೆ ಹದಿನೈದು ದಿನಕ್ಕೆ ಒಂದು ಬಾರಿ ಮಾತ್ರ ನೀರು ಬರುತ್ತಿರುವುದು ಮಾತ್ರ ತಪ್ಪುತ್ತಿಲ್ಲ ಎಂದು ದ್ಯಾಮಣ್ಣ ಬಿಂಗಿ, ಕರಗಪ್ಪ ಗಡೆಕಾರ, ಹುಲಿಗೆವ್ವ ತೊಂಡಿಹಾಳ, ಕಾಳಮ್ಮ ಕಂಬಾರ, ರಮೇಶ ಪಾಟೀಲ, ಹನುಮಂತ ಕುಷ್ಟಗಿ, ನಾಗುಸಾ ರಂಗ್ರೇಜ್ ದೂರಿದರು.