ಕನಕಗಿರಿ:ಕನಕಗಿರಿ ತಾಲ್ಲೂಕಿನಲ್ಲಿ ಬರ ಆವರಿಸಿದ ಹಿನ್ನೆಲೆಯಲ್ಲಿ ಗೋಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ ಅವರ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಅವರಿಗೆ ರೈತ ಸಂಘಟನೆ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ರೈತ ಸಂಘಟನೆಯ ಅಧ್ಯಕ್ಷ ರುದ್ರಪ್ಪ ಮಾತನಾಡಿ, ಮೇವು ಬ್ಯಾಂಕ್ ಸ್ಥಾಪನೆಯಿಂದ ರೈತರಿಗೆ ಸಮಸ್ಯೆಯಾಗಲಿದೆ. ಮೇವು, ಭತ್ತದ ಹುಲ್ಲು ದಾಸ್ತಾನು ಇಲ್ಲದೆ ಅಧಿಕಾರಿಗಳು ಮೇವು ಬ್ಯಾಂಕ್ ತೆರೆದಿರುವುದು ಸರಿ ಅಲ್ಲ. ಗೋ ಶಾಲೆ ಆರಂಭಿಸಿ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ರಮೇಶ ನಾಯಕ ಮಾತನಾಡಿ, ಸತತ ಮೂರು ವರ್ಷಗಳಿಂದ ಬರ ಇದ್ದು, ಈ ಭಾಗದ ರೈತರು, ಕೂಲಿಕಾರರು ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ಸಾಲಿನ ಬೆಳೆ ವಿಮೆ ಹಣ ಜಮಾ ಮಾಡಿಲ್ಲ. ರೈತರ ಖಾತೆಗೆ ಶೀಘ್ರ ಹಣ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗಣೇಶರಡ್ಡಿ ಮಾತನಾಡಿ, ಉದ್ಯೋಗ ಇಲ್ಲದ ಕಾರಣ ಜನರು ಕುಟುಂಬ ಜೀವನ ನಡೆಸಲು ಹರಸಾಹಸ ಪಡುವಂತಾಗಿದೆ. ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ, ಏನೆ ಕಷ್ಟ ಬಂದರೂ ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಸುನೀಲಕುಮಾರ ಮಾತನಾಡಿ, ತಾಲ್ಲೂಕಿನ ವ್ಯವಸ್ಥೆಯನ್ನು ಪರಿಶೀಲಿಸಿ ಶೀಘ್ರ ಗೋಶಾಲೆಯನ್ನು ಆರಂಭಿಸಲಾಗುವುದು ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾಶೇಖ್ ಅವರಿಗೆ ರೈತರು ಮನವಿ ಸಲ್ಲಿಸಿದರು. ಪ್ರಮುಖರಾದ ಸಿದ್ದಪ್ಪ ನಿರಲೂಟಿ, ಸಗರಪ್ಪ ಕಂಪ್ಲಿ, ಉಮಕಾಂತ ದೇಸಾಯಿ, ಸೂಗಯ್ಯಸ್ವಾಮಿ, ಯಮನೂರಪ್ಪ, ಅಯ್ಯನಗೌಡ , ಕಾಂತಪ್ಪ ಕೋರಡ್ಡಿ , ಕನಕರೆಡ್ಡಿ ಇದ್ದರು.