ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವ ಹಳೆಯ ಜಾನಿಯ ತದ್ರೂಪಿ

Last Updated 30 ಮಾರ್ಚ್ 2018, 11:38 IST
ಅಕ್ಷರ ಗಾತ್ರ

ಚಿತ್ರ: ಜಾನಿ ಜಾನಿ ಯೆಸ್‌ ಪಪ್ಪಾ

ನಿರ್ಮಾಪಕ: ದುನಿಯಾ ವಿಜಯ್

ನಿರ್ದೇಶನ: ಪ್ರೀತಂ ಗುಬ್ಬಿ

ತಾರಾಗಣ: ದುನಿಯಾ ವಿಜಯ್, ರಚಿತಾ ರಾಮ್, ರಂಗಾಯಣ ರಘು, ಅಚ್ಯುತ್‌ಕುಮಾರ್, ಸಾಧುಕೋಕಿಲ, ಗಡ್ಡಪ್ಪ

ಹಿಂದಿನ ‘ಜಾನಿ’ಗಿಂತ ನಾನು ಬೇರೆ ಥರ ಎಂದು ಹೇಳಿಕೊಂಡು ಬಂದಿರುವ ಚಿತ್ರ ‘ಜಾನಿ ಜಾನಿ ಯೆಸ್‌ ಪಪ್ಪಾ’. ಆದರೆ, ಹಲವು ವಿಷಯಗಳಲ್ಲಿ ಈತ ಹಳೆಯ ಜಾನಿಯ ತದ್ರೂಪಿ. ಇದು ‘ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌’ ಚಿತ್ರದ ಮುಂದುವರಿಕೆಯ ಭಾಗ. ಇಲ್ಲಿ ಜಾನಿಯ ಸಮಾಜ ಸೇವೆಗೆ ಡಿಜಿಟಲ್‌ ಸ್ಪರ್ಶ ಸಿಕ್ಕಿದೆಯಷ್ಟೆ.

ಪ್ರೀತಿಯ ಕಥೆ ಇಟ್ಟುಕೊಂಡು ಬಂದಿರುವ ಬಹುತೇಕ ಚಿತ್ರಗಳಲ್ಲಿ ಕಾಣಸಿಗುವ ಸಾಮಾನ್ಯ ಅಂಶಗಳೇ ಈ ಜಾನಿಯನ್ನು ಸುತ್ತುವರಿದಿವೆ. ಹಾಗಾಗಿ ಕಥೆಯಲ್ಲಾಗಲಿ, ಅದರ ನಿರೂಪಣೆಯಲ್ಲಾಗಲಿ ವಿಶೇಷತೆ ಇಲ್ಲ. ಈಗಾಗಲೇ ಬಳಸಿ ಸವಕಲಾಗಿರುವ ಸಿದ್ಧಸೂತ್ರಗಳನ್ನೇ ಕೊಂಚ ಭಿನ್ನವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ.

ಜಾನಿ ರೈನ್‌ಬೋ ಕಾಲನಿಯ ವಾಸಿ. ಅದಕ್ಕೆ ಅವನೇ ಹೀರೊ. ಸಮಾಜ ಸೇವೆ ಅವನ ಧ್ಯೇಯ. ಇದಕ್ಕಾಗಿ ಜಾನಿ ಡಾಟ್‌ಕಾಂ ತೆರೆಯುತ್ತಾನೆ. ಹಣ ವಸೂಲಿ ಮಾಡುವ ತಂತ್ರಗಾರಿಕೆಯೂ ಅವನಿಗೆ ಕರಗತ. ಆದರೆ, ವಸೂಲಿಯಾದ ಹಣ ಬಡವರ ಸೇವೆಗೆ ಮೀಸಲು. ಅವನ ಮುಷ್ಟಿಯಿಂದ ಏಟು ತಿಂದ ಎದುರಾಳಿಗಳು ನೆಲಕಚ್ಚುತ್ತಾರೆ. ಅವನು ಮಾಡುವ ಎಲ್ಲ ಕೆಲಸಗಳಿಗೂ ಒತ್ತಾಸೆಯಾಗಿ ಪಪ್ಪಾ(ರಂಗಾಯಣ ರಘು) ಜೊತೆಗಿರುತ್ತಾರೆ.

ಸ್ನೇಹಿತನ ವಿವಾಹದ ಎಡವಟ್ಟು ಜಾನಿಯ ಕೊರಳಿಗೆ ಸುತ್ತಿಕೊಳ್ಳುತ್ತದೆ. ಅದೇ ವೇಳೆಗೆ ಅಮೆರಿಕದಲ್ಲಿ ನೆಲೆಯೂರಲು ಕನಸು ಕಾಣುತ್ತಿರುವ ಪ್ರಿಯಾ, ಜಾನಿಯ ಹೃದಯ ಸೆಳೆಯುತ್ತಾಳೆ. ಆದರೆ, ಅವಳ ಕಣ್ಣಿಗೆ ಜಾನಿ ‘ಈಸ್ಟ್‌ಮನ್‌ ಕಲರ್‌’ ಸಿನಿಮಾದ ವಿಲನ್‌ನಂತೆ ಕಾಣುತ್ತಾನೆ. ಆಕೆ ಅಮೆರಿಕಕ್ಕೆ ತೆರಳುವುದು ಅವರಪ್ಪನಿಗೂ ಇಷ್ಟವಿರುವುದಿಲ್ಲ. ಅವಳ ಕನಸಿಗೆ ತಡೆಯೊಡ್ಡಲು ಜಾನಿಯೊಂದಿಗೆ ಪ್ರಿಯಾಳ ಅಪ್ಪ ಕೂಡ ಕೈಜೋಡಿಸುತ್ತಾನೆ. ಇದರಲ್ಲಿ ಜಾನಿ ಮತ್ತು ಅವನ ತಂಡ ಯಶಸ್ವಿಯಾಗುತ್ತದೆಯೇ ಎನ್ನುವುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು. 

ಪ್ರೀತಿ, ಅಪ್ಪನ ಸೆಂಟಿಮೆಂಟ್‌, ಸ್ನೇಹ ಎಲ್ಲವನ್ನೂ ಬೆಸೆದು ಕಥೆ ಹೊಸೆದಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ವಿಜಯ್ ಅವರ ಅಭಿಮಾನಿಗಳನ್ನು ರಂಜಿಸಲು ಭರ್ಜರಿ ಸಾಹಸ ದೃಶ್ಯಗಳೂ ಚಿತ್ರದಲ್ಲಿವೆ. ದೈನಂದಿನ ಬದುಕಿನಲ್ಲಿ ನಡೆಯುವ ಸಾಮಾನ್ಯ ಸಂಗತಿ ಇಟ್ಟುಕೊಂಡೇ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಡಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ಆದರೆ, ಕೆಲವೆಡೆ ಅನಗತ್ಯವಾಗಿ ತುರುಕಿರುವ ಕೆಟ್ಟ ಹಾಸ್ಯ ಪ್ರೇಕ್ಷಕರಿಗೆ ತ್ರಾಸದಾಯಕವಾಗಿದೆ. ಇದು ಕಥನದ ನಿರೂಪಣೆಗೂ ಅಡ್ಡಿಯುಂಟು ಮಾಡುತ್ತದೆ.

ಇಂಗ್ಲಿಷ್‌ ವ್ಯಾಮೋಹಿ ಹುಡುಗಿ ಪಾತ್ರದಲ್ಲಿ ರಚಿತಾ ರಾಮ್‌ ಪಡ್ಡೆಹುಡುಗರ ಮನದಲ್ಲಿ ಮಿಂಚು ಹರಿಸುತ್ತಾರೆ. ದುನಿಯಾ ವಿಜಯ್‌ ಅವರದ್ದು ಹಳೆಯ ಜಾನಿಯ ವರಸೆ. ರಂಗಾಯಣ ರಘು ಮತ್ತು ಅಚ್ಯುತ್‌ಕುಮಾರ್ ಅವರದ್ದು ಅಚ್ಚುಕಟ್ಟಾದ ಅಭಿನಯ. ಗಡ್ಡಪ್ಪ ಅವರ ಪಾತ್ರ ದ್ವಂದ್ವಾರ್ಥದ ಸಂಭಾಷಣೆ ಹೇಳುವ ಕೈ‌ಗೊಂಬೆಯಾಗಿ ಇಲ್ಲಿಯೂ ಮುಂದುವರಿದಿದೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಚಿತ್ರಕ್ಕೆ ಹೊಸದೇನನ್ನೂ ಕಟ್ಟಿಕೊಟ್ಟಿಲ್ಲ. ಎ. ಕರುಣಾಕರ್ ಅವರ ಛಾಯಾಗ್ರಹಣ ಕೆಲವು ದೃಶ್ಯಗಳಿಗಷ್ಟೆ ಸಹನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT