ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಸಂಜಯ್ ನಗರದ ಆರ್ಎಮ್ವಿ ಕ್ಲಬ್ ಬಳಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
ಓಂಕಾರ್ ಮಾಣಿಕ್ (23) ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, 2000 ಮತ್ತು ₹500 ಮುಖ ಬೆಲೆಯ ಆರು ನೋಟು ಹಾಗೂ 40 ಮೈಸೂರು ಪೇಟಾಗಳನ್ನು ಜಫ್ತಿ ಮಾಡಿದ್ದಾರೆ.
₹15 ಸಾವಿರ ನಗದು ಹಾಕಿರುವ ಮೂರು ಲಕೋಟೆಗಳನ್ನು ಈತನ ಬಳಿ ಸಿಕ್ಕಿದ್ದು, ಲಕೋಟೆಯ ಮೇಲೆ ಸುಮತಿ, ಗುಲಾಬಿ, ಜ್ಯೋತಿ ಹಾಗೂ ಎಸ್. ಸುರೇಶ್, ವಿಧಾನ ಪರಿಷತ್ ಸದಸ್ಯರು ಎಂದು ಬರೆಯಲಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳು ಸಂಜಯ್ ನಗರ ಠಾಣೆಗೆ ದೂರು ನೀಡಿದ್ದಾರೆ.
‘ಬಿಜೆಪಿಯಿಂದ ಉಪ್ಪಾರರ ಕಡೆಗಣನೆ’
ಬೆಂಗಳೂರು: ‘ಉಪ್ಪಾರ ಜನಾಂಗದ ಅಭ್ಯರ್ಥಿಗಳಿಗೆ ಟಿಕೆಟ್ ಕೊಡದೆ ಬಿಜೆಪಿ ನಿರ್ಲಕ್ಷ್ಯಮಾಡಿದೆ. ಹಾಗಾಗಿ ಆ ಪಕ್ಷಕ್ಕೆ ಮತ ಹಾಕದಿರಲು ನಿರ್ಧರಿಸಿದ್ದೇವೆ’ ಎಂದು ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಸದಸ್ಯ ಶಿವಕುಮಾರ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಮ್ಮ ಜನಾಂಗದ ಅಭ್ಯರ್ಥಿಗಳಿಗೆ ತಲಾ ಒಂದು ಟಿಕೆಟ್ ನೀಡಿವೆ. ಆದರೆ ಬಿಜೆಪಿ ಮಾತಿಗೆ ತಪ್ಪಿದೆ. ಆದ್ದರಿಂದ ನಾವು ಆ ಪಕ್ಷದ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ’ ಎಂದರು.
ಕರ್ನಾಟಕ ಅಣ್ಣಾ ಡಿಎಂಕೆ ಪಕ್ಷ ಅಸ್ತಿತ್ವಕ್ಕೆ
ಬೆಂಗಳೂರು: ‘ಕರ್ನಾಟಕ ಅಣ್ಣಾ ಡಿ.ಎಂ.ಕೆ ಪಕ್ಷವನ್ನು ಸ್ಥಾಪನೆ ಮಾಡಿದ್ದೇವೆ. ಇಲ್ಲಿಯ ನಾಡು ನುಡಿಗಾಗಿ ಹೋರಾಟ ಮಾಡುತ್ತೇವೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ನಮ್ಮದು ಸ್ವತಂತ್ರ ಪಕ್ಷ. ತಮಿಳುನಾಡಿನ ರಾಜಕೀಯ ಮುಖಂಡರಾದ ದಿವಂಗತ ಜಯಲಲಿತಾ ಅವರ ತತ್ವಗಳ ತಳಹದಿಯಲ್ಲಿ ನಾವು ದುಡಿಯುತ್ತಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಿದ್ದೇವೆ’ ಎಂದು ಅವರು ಹೇಳಿದರು.