ಕೋಡಿಹಳ್ಳಿ (ಕನಕಪುರ): ಕಾವೇರಿ ವನ್ಯಜೀವಿಧಾಮ ಮೊಗ್ಗೂರು ಗ್ರಾಮದ ಅರಣ್ಯದಂಚಿನಲ್ಲಿ ಕಳ್ಳ ಬೇಟೆಗಾರರು ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಕ್ಕಿ ಸಾವನ್ನಪ್ಪಿದೆ.
5 ವರ್ಷದ ಗಂಡು ಚಿರತೆಯೆಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಅರಣ್ಯದ ಹಳ್ಳವೊಂದರಲ್ಲಿ ನೀರು ಕುಡಿಯಲು ಬರುವ ಕಾಡು ಪ್ರಾಣಿಗಳ ಬೇಟೆಗೆ ಹಾಕಿದ್ದ ಉರುಳಿಗೆ ಚಿರತೆ ಸಿಲುಕಿದೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡುವುದಕ್ಕೂ ಕೆಲ ನಿಮಿಷಗಳ ಹಿಂದೆಷ್ಟೇ ಪ್ರಾಣ ಬಿಟ್ಟಿದೆ. ಕೊಂಚ ಮುಂಚಿತವಾಗಿಯಾದರೂ ಬಂದಿದ್ದರೆ ಬದುಕಿಸಬಹುದಾಗಿತ್ತು ಎಂದು ಅರಣ್ಯಾಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಾಡುಹಂದಿ, ಜಿಂಕೆ ಮೊದಲಾದ ಪ್ರಾಣಿಗಳನ್ನು ಬೇಟೆಯಾಡಲು ಸ್ಥಳೀಯ ಕಳ್ಳಬೇಟೆಗಾರರು ಬೈಕ್ನ ಗೇರ್ ವೈರ್ ಬಳಸಿ ಅದರಲ್ಲಿ ಉರುಳು ತಯಾರು ಮಾಡುತ್ತಾರೆ. ಮರದ ಬುಡಕ್ಕೆ ಒಂದು ತುದಿಯನ್ನು ಕಟ್ಟಿ ಮತ್ತೊಂದು ತುದಿಯನ್ನು ಉರುಳನ್ನಾಗಿ ಮಾಡಿ ಪ್ರಾಣಿಗಳು ಓಡಾಡುವ ಜಾಗ, ನೀರು ಕುಡಿಯುವ ಜಾಗದಲ್ಲಿ ಕಟ್ಟುತ್ತಾರೆ. ಉರುಳಿಗೆ ಸಿಲುಕುವ ಕಾಡು ಪ್ರಾಣಿಗಳನ್ನು ಹಿಡಿದು ಅಲ್ಲಿಂದ ಹೊತ್ತೊಯ್ಯುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಣಿ ಸ್ವಯಂ ಸೇವಾ ಸಂಸ್ಥೆ ಪ್ರತಿನಿಧಿಗಳ ಸಮ್ಮುಖದಲ್ಲಿ ಪಶು ವೈದ್ಯಾಧಿಕಾರಿ ಡಾ. ಯು.ಎಂ.ಕುಮಾರ್ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಕಳ್ಳಬೇಟೆಗಾರರು ವ್ಯವಸ್ಥಿತವಾಗಿ ಬೇಟೆಯಲ್ಲಿ ತೊಡಗಿದ್ದು ಶೀಘ್ರವೇ ಬಂಧಿಸುವುದಾಗಿ ಅರಣ್ಯಾಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ. ಪ್ರಭಾರ ಸಹಾಯಕ ಅರಣ್ಯಾಧಿಕಾರಿ ಅಂಕರಾಜು, ವಲಯ ಅರಣ್ಯಾಧಿಕಾರಿ ಕುಮಾರ್, ಅರಣ್ಯ ರಕ್ಷಕರಾದ ವಿಶ್ವನಾಥ್, ಶಬೀರ್, ಮಂಜುನಾಥ್ ಇದ್ದರು.