ಮೈಸೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳಲ್ಲಿ ಏನು ಮಾಡಿದ್ದಾರೆ ಮತ್ತು ಮೈಸೂರು ರಾಜರು ಮೈಸೂರಿಗೆ ಏನೆಲ್ಲಾ ಕೊಡುಗೆ ನೀಡಿದ್ದರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ’ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
‘ರಾಜರ ಬಳಿಕ ಮೈಸೂರು ಅಭಿವೃದ್ದಿಪಡಿಸಿದ್ದು ನಾನೇ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿದರು.
ಇಂದಿನ ಯುಗಕ್ಕೂ ರಾಜರ ಕಾಲಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಂದು ಏನಾಗಿತ್ತು ಮತ್ತು ಇಂದು ಏನೆಲ್ಲಾ ಆಗುತ್ತಿದೆ. ಮೈಸೂರು ಸಂಸ್ಥಾನದ ಆಡಳಿತ ಹೇಗಿತ್ತು ಎಂಬುದು ಜನರಿಗೆ ತಿಳಿದಿದೆ. ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳುವುದಿಲ್ಲ ಎಂದರು.
ರಾಜಕೀಯ ಪ್ರವೇಶ ಇಲ್ಲ: ‘ಸದ್ಯಕ್ಕೆ ರಾಜಕೀಯಕ್ಕೆ ಬರಲು ಆಸಕ್ತಿ ಇಲ್ಲ. ಜನರಿಗೆ ಏನಾದರೂ ಕೊಡುಗೆ ನೀಡಲು ಬಯಸುತ್ತೇನೆಯೇ ಹೊರತು ರಾಜಕೀಯಕ್ಕೆ ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.