ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲಿಗೆ ಕಾದಿರುವ ತಡೆಗೋಡೆ ರಹಿತ ಕೆರೆಗಳು

Last Updated 29 ಜನವರಿ 2018, 7:18 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಸುತ್ತಮುತ್ತಲಿನ ಕೆರೆಗಳಿಗೆ ತಡೆಗೋಡೆ ಇಲ್ಲದಿರುವುದರಿಂದ ಆಗಾಗ ಪ್ರಾಣಹಾನಿ ಸಂಭವಿಸುತ್ತಿದ್ದರೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.

ನಗರದ ಹೊರವಲಯದ ಚಟ್ಳಳ್ಲಿ ಸಮೀಪ ತಡೆಗೋಡೆ ಇಲ್ಲದ ಪರಿಣಾಮ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಈಚೆಗೆ ಕೆರೆಗೆ ಬಿದ್ದು ಅನೇಕ ಪ್ರಯಾಣಿಕರು ಗಾಯಗೊಂಡಿದ್ದರು. ಅಲ್ಲದೇ, ಪುರಲೆ ಕೆರೆ ಏರಿ ಮೇಲೆ ಶಿವಮೊಗ್ಗ ಮಾರ್ಗವಾಗಿ ಬಳ್ಳಾರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಗದ್ದೆಗೆ ಉರುಳಿ 10 ಮಂದಿ ಗಾಯಗೊಂಡಿದ್ದರು. ನವುಲೆ ಕೆರೆ ಏರಿ ಮೇಲೆ ನಿತ್ಯ ಹತ್ತಾರು ಅನಾಹುತಗಳು ನಡೆಯುತ್ತಿವೆ. ಇಂತಹ ಘಟನೆಗಳು ಕೆರೆ ಏರಿ ಮೇಲಿನ ರಸ್ತೆ ಎಷ್ಟು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿವೆ.

ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ತಡೆಗೋಡೆ ನಿರ್ಮಿಸುವಂತೆ ಮನವಿ ಸಲ್ಲಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಕೆಲವು ಕೆರೆಗಳ ಏರಿಯ ಬದಿಗೆ ಒಂದೂವರೆ ಅಡಿಯ ಸಿಮೆಂಟ್‌ ಕಂಬಗಳನ್ನು ನೆಟ್ಟಿವೆ. ಆದರೆ, ಇನ್ನೂ ಹಲವು ಕೆರೆಗಳಿಗೆ ಇನ್ನೂ ತಡೆಗೋಡೆ ಅಥವಾ ಸಿಮೆಂಟ್‌ ಕಂಬಗಳನ್ನು ನಿರ್ಮಿಸಿಲ್ಲ. ಕೆಲವೆಡೆ ಕಳಪೆ ಗುಣಮಟ್ಟದ ಸಿಮೆಂಟ್‌ ಕಂಬಗಳು ಹಾಕಿದ ವರ್ಷದಲ್ಲೇ ಮುರಿದು ಹೋಗಿವೆ. ಇದರಿಂದ ಸರ್ಕಾರದ ಹಣ ವ್ಯರ್ಥವಾಗಿದೆಯೇ ಹೊರತು, ಅಪಘಾತ ನಿಯಂತ್ರಣಗೊಂಡಿಲ್ಲ ಎಂದು ದೂರುಗಳು ಕೇಳಿ ಬರುತ್ತಿವೆ.

ಭರವಸೆಗಳ ಮಹಾಪೂರ: ಕೆರೆಗೆ ವಾಹನ ಉರುಳಿ ಬಿದ್ದು ಅಮಾಯಕರ ಸಾವು-ನೋವು ಸಂಭವಿಸಿದಾಗ ಅಧಿಕಾರಿಗಳು, ‘ಕೆರೆ ಏರಿ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ತಡೆಗೋಡೆ ನಿರ್ಮಿಸಲಾಗುವುದು. ರಸ್ತೆ ವಿಸ್ತರಣೆ ಮಾಡಲಾಗುವುದು. ಸೂಚನಾ ಫಲಕ ಅಳವಡಿಸಲಾಗುವುದು ಎಂಬ ಭರವಸೆ ನೀಡುತ್ತಾರೆ. ಆದರೆ, ಕ್ರಮೇಣ ಈ ಭರವಸೆಗಳು ಮರೆಯಾಗುತ್ತವೆ. ಮತ್ತೆ ಎಲ್ಲೋ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ಅಮಾಯಕರು ಬಲಿಯಾದಾಗ ಈ ಭರವಸೆಗಳು ನೆನಪಾಗುತ್ತವೆ. ಹಾಗೆಯೇ ಸಂಬಂಧಿಸಿದ ಇಲಾಖೆಗಳು ಇತ್ತ ಗಮನಹರಿಸುತ್ತಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಶೀಘ್ರ ತಡೆಗೋಡೆ ನಿರ್ಮಿಸಿ: ನಗರದ ಪುರಲೆ ಕೆರೆಯ ಏರಿ ಮೇಲೆ ಹಲವು ಅಪಘಾತಗಳು ಸಂಭವಿಸಿ ಅನೇಕರು ಸಾವಿಗೀಡಾಗಿದ್ದಾರೆ. ಕೆಲವರು ಕೈ ಕಾಲು ಕಳೆದುಕೊಂಡಿದ್ದಾರೆ. ಇಂತಹ ಕೆರೆ ಏರಿಯ ರಸ್ತೆ ಕಿರಿದಾಗಿದೆ. ರಸ್ತೆ ವಿಸ್ತರಣೆ ಮಾಡಬೇಕು ಎಂಬುದು ಈ ಭಾಗದ ಅನೇಕರ ದಶಕದ ಬೇಡಿಕೆಯಾಗಿತ್ತು.

ಹೋರಾಟಗಳು ಹಾಗೂ ಅನಾಹುತಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಇದೀಗ ರಸ್ತೆ ವಿಸ್ತರಣೆಯಾಗಿದೆ. ಆದರೆ, ಇಂದಿಗೂ ರಸ್ತೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣವಾಗಿಲ್ಲ. ಒಂದು ಬದಿಯಲ್ಲಿ ಆಳವಾದ ಕೆರೆ, ಮತ್ತೊಂದು ಬದಿಯಲ್ಲಿ ತಗ್ಗು ಪ್ರದೇಶ ಇದೆ. ಇಲ್ಲಿ ವಾಹನ ಸವಾರರು ಪ್ರಾಣ ಭಯದಿಂದಲೇ ಸಂಚರಿಸುವಂತಾಗಿದೆ.

ನನೆಗುದಿಗೆ ನವುಲೆ ಕೆರೆ ಏರಿ: ಇನ್ನು ನಗರದ ಮಧ್ಯಭಾಗದಲ್ಲಿರುವ ನವುಲೆ ಕೆರೆ ಏರಿ ಹತ್ತು ಹಲವು ಸಮಸ್ಯೆಗಳ ಮೂಲವಾಗಿದೆ. ತಡೆಗೋಡೆ, ರಸ್ತೆ ವಿಸ್ತರಣೆ ನಡೆಯದೇ ಈ ಭಾಗದಲ್ಲಿ ಸಂಚರಿಸುತ್ತಿರುವ ಪ್ರಯಾಣಿಕರಿಗೆ ನರಕಯಾತನೆಯ ದರ್ಶನವಾಗುತ್ತಿದೆ. ಇನ್ನೂ ಈ ಭಾಗದಲ್ಲಿ ಶಾಲೆ, ಕಾಲೇಜುಗಳು ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಅವರೆಲ್ಲರೂ ಪ್ರತಿ ದಿನ ಸಮಸ್ಯೆಗಳೊಂದಿಗೆ ಮುನ್ನಡೆಯುವಂತಾಗಿದೆ.

* * 

ತಡೆಗೋಡೆ ಇಲ್ಲದ ಕೆರೆ ಏರಿ ರಸ್ತೆಗಳಲ್ಲಿ ರಾತ್ರಿ ಪ್ರಯಾಣ ಕಷ್ಟ. ಶೀಘ್ರವೇ ತಡೆಗೋಡೆ ನಿರ್ಮಿಸಿ, ಸೂಚನ ಫಲಕ ಅಳವಡಿಸಬೇಕು.
–ತಂಗರಾಜ್‌, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT