ಸಾಗರ: ಲಾಕ್ಡೌನ್ನಿಂದ ಕಂಗೆಟ್ಟಿರುವ, ಆರ್ಥಿಕವಾಗಿ ದುರ್ಬಲರಾಗಿರುವ ವ್ಯಕ್ತಿಗಳಿಗೆ ಇಲ್ಲಿನ ಸೋಶಿಯಲ್ ಮೂಮೆಂಟ್ ಸಂಘಟನೆಯ ಕಾರ್ಯಕರ್ತರು ಶನಿವಾರ ಆಹಾರ ಧಾನ್ಯ ವಿತರಿಸಿದರು.
ರಾಮನಗರ, ಎಸ್.ಎನ್.ನಗರ, ಅಣಲೆಕೊಪ್ಪ, ಅರಮನೆ ಕೇರಿ, ಚಿಪ್ಪಳಿ ಮೊದಲಾದ ಭಾಗಗಳಲ್ಲಿ ಸಂಚರಿಸಿದ ಸಂಘಟನೆಯ ಪ್ರಮುಖರು ಸಂಕಷ್ಟದಲ್ಲಿರುವ ಕಾರ್ಮಿಕರು, ನಿರ್ಗತಿಕರಿಗೆ ಅಕ್ಕಿ, ಗೋಧಿ, ಸಕ್ಕರೆ, ಟೀ ಪುಡಿ, ತರಕಾರಿ ವಿತರಿಸಿದ್ದಾರೆ.
ಸಂಘಟನೆಯ ಇಮ್ರಾನ್ ಸಾಗರ್, ರಫೀಕ್, ಸಿರಾಜ್, ಸಲೀಂ, ಸಮೀರ್, ಅಜರುದ್ದೀನ್, ಫಯಾಜ್ ಇದ್ದರು.
ಇಲ್ಲಿನ ರೆಡ್ ಚಿಲ್ಲಿ ಹೋಟೆಲ್ನಿಂದ ಲಾಕ್ಡೌನ್ ಅವಧಿ ಮುಗಿಯುವವರೆಗೂ ನಗರದ ವಿವಿಧ ಬಡಾವಣೆಗಳಲ್ಲಿನ ನಿರ್ಗತಿಕರಿಗೆ ಉಚಿತವಾಗಿ ಊಟ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿನ ಎಪಿಎಂಸಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 25 ಲಕ್ಷ ನೀಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಎಚ್.ಎಂ. ರವಿಕುಮಾರ್ ತಿಳಿಸಿದ್ದಾರೆ.
ಉಚಿತ ಆಂಬುಲೆನ್ಸ್ ಸೇವೆ: ನಗರದಲ್ಲಿ ಆಂಬುಲೆನ್ಸ್ ಸೇವೆ ಒದಗಿಸುತ್ತಿರುವವರು ಒಟ್ಟಾಗಿ ‘ಆಪತ್ಬಾಂಧವ ಫ್ರೆಂಡ್ಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯ ಮೂಲಕ ಅನಾರೋಗ್ಯದಿಂದ ಬಳಲುತ್ತಿರುವ ಬಡ ರೋಗಿಗಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ, ಅನಾಥರಿಗೆ ಉಚಿತವಾಗಿ ಆಂಬುಲೆನ್ಸ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ.
ಆಂಬುಲೆನ್ಸ್ ಸೇವೆ ಅವಶ್ಯಕತೆ ಇರುವವರು ಇಮ್ರಾನ್ ಖಾನ್ (9901346442), ಸಂತೋಷ್ (7892837650), ನಾಗರಾಜ್ (7760213679), ಮನ್ಸೂರ್ (7620242301) ಅವರನ್ನು ಸಂಪರ್ಕಿಸಬಹುದು.