ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಡಿಮೆ ಮತದಾನದಿಂದ ಅಯೋಗ್ಯರ ಆಯ್ಕೆ’

ಮತದಾರರ ಜಾಗೃತಿಗೆ ‘ಸ್ವೀಪ್‌’ನಿಂದ ಕವಿಗೋಷ್ಠಿ
Last Updated 6 ಏಪ್ರಿಲ್ 2018, 10:21 IST
ಅಕ್ಷರ ಗಾತ್ರ

ಮಂಗಳೂರು: ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾದರೆ ಅದು ಅಯೋಗ್ಯರ ಆಯ್ಕೆಗೆ ದಾರಿ ಮಾಡಿಕೊಡುತ್ತದೆ ಎಂದು ಕವಿ ಎಚ್‌.ಡುಂಡಿರಾಜ್‌ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಸ್ವೀಪ್‌’ ಸಮಿತಿ ವತಿಯಿಂದ ‘ನಾನು ಮತ ಚಲಾಯಿಸುತ್ತೇನೆ’ ಶೀರ್ಷಿಕೆಯ ಅಡಿಯಲ್ಲಿ ನಗರದ ಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ಬಹುಭಾಷಾ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ನಗರ ಪ್ರದೇಶದ ಮಧ್ಯಮ ವರ್ಗದ ಮತದಾರರು ಮತದಾನದಿಂದ ದೂರ ಉಳಿಯುವುದು ಹೆಚ್ಚಾಗುತ್ತಿದೆ. ಇದು ನಗರ ಪ್ರದೇಶಗಳಲ್ಲಿ ಸರಾಸರಿ ಮತದಾನದ ಪ್ರಮಾಣದಲ್ಲಿ ಕುಸಿತವಾಗಲು ಕಾರಣವಾಗಿದೆ. ಇಂತಹ ಬೆಳವಣಿಗೆಯಿಂದ ಅರ್ಹ ಅಭ್ಯರ್ಥಿಗಳು ಸೋತು, ಅನರ್ಹರು ಆಯ್ಕೆಯಾಗುತ್ತಿದ್ದಾರೆ ಎಂದರು.

ಪುರಾತನ ಕಾಲದಿಂದಲೂ ಭಾರತದಲ್ಲಿ ಸಾಹಿತ್ಯ, ಗಣಿತ, ವಿಜ್ಞಾನ, ಜ್ಯೋತಿಷ ಸೇರಿದಂತೆ ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಜ್ಞಾನ ಕಾವ್ಯದ ರೂಪದಲ್ಲೇ ಇರುತ್ತಿತ್ತು. ಈಗ ಚುನಾವಣೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕಾವ್ಯದ ಶಕ್ತಿಯ ಮೇಲೆ ನಂಬಿಕೆ ಇರಿಸಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಗುಣವಂತರನ್ನು ಆರಿಸಿ: ಮುಖ್ಯ ಅತಿಥಿಯಾಗಿದ್ದ ಹಿರಿಯ ವೈದ್ಯ ಡಾ.ಶಾಂತಾರಾಂ ಶೆಟ್ಟಿ ಮಾತನಾಡಿ, ‘ಚುನಾವಣೆಗಳಲ್ಲಿ ಹಣವಂತರು ಗೆದ್ದು ಬರುವುದು ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ನಮಗೆ ಹಣವಂತರಿಗಿಂತಲೂ ಗುಣವಂತರು ಬೇಕು. ದೇಶಕ್ಕಾಗಿ, ಜನರಿಗಾಗಿ ದುಡಿಯುವ ಬದ್ಧತೆ ಇರುವವರನ್ನೇ ಆಯ್ಕೆ ಮಾಡಬೇಕು’ ಎಂದರು.

‘ನಾನು 50 ವರ್ಷಗಳಿಂದಲೂ ಎಲ್ಲ ಚುನಾವಣೆಗಳಲ್ಲೂ ತಪ್ಪದೇ ಮತದಾನ ಮಾಡಿದ್ದೇನೆ. ಆಗಿನಿಂದ ಈಗಿನವರೆಗಿನ ಬೆಳವಣಿಗೆಗಳನ್ನು ಗಮನಿಸಿದ್ದೇನೆ. ಆಗ ಸಂಸದರು, ಶಾಸಕರಾಗಿದ್ದವರು ಮನೆ ಮಾರಿಕೊಂಡ ಉದಾಹರಣೆಗಳಿವೆ. ಈಗ ಸಂಸದರು, ಶಾಸಕರಾದರೆ ಐದು ವರ್ಷ  ಪೂರ್ಣಗೊಳ್ಳುವ ವೇಳೆಗೆ ಆಸ್ತಿಯಲ್ಲಿ ಕೆಲವು ಕೋಟಿಗಳಷ್ಟು ಏರಿಕೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ಚುನಾವಣೆಯಲ್ಲಿ ಯುವ ಮತದಾರರ ಪಾತ್ರ ದೊಡ್ಡದು. ಭಾರತದ ಮತದಾರರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲ ಒಗ್ಗಟ್ಟಿನಿಂದ ಮತದಾನ ಮಾಡಿದರೆ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವುದು ಖಚಿತ. ಯುವಕರ ಆಯ್ಕೆಯ ಜನಪ್ರತಿನಿಧಿಗಳನ್ನೇ ಕಾಣಲು ಸಾಧ್ಯವಾಗುತ್ತದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ‘ಸ್ವೀಪ್‌’ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ.ಎಂ.ಆರ್‌.ರವಿ, ‘ಮತದಾರರ ಜಾಗೃತಿಯಲ್ಲಿ ಕವಿಗೋಷ್ಠಿ ನಡೆಸುತ್ತಿರುವುದು ಇದೇ ಮೊದಲು. ಈ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗವು ಶ್ಲಾಘಿಸಿದೆ’ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.  ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಲ್‌.ವೈಶಾಲಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎಚ್‌.ಖಾದರ್‌ ಷಾ, ರಥಬೀದಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಹೆಬ್ಬಾರ್‌ ಉಪಸ್ಥಿತರಿದ್ದರು.

16 ಕವನಗಳ ವಾಚನ: ಮಂಗಳೂರು ವಿಶ್ವವಿದ್ಯಾಲಯದ ಪ್ರಸನ್ನ ಅವರ ‘ನಾನು ಮತ ಚಲಾಯಿಸುತ್ತೇನೆ’ ಕವನದ ವಾಚನದೊಂದಿಗೆ ಕವಿಗೋಷ್ಠಿ ಆರಂಭವಾಯಿತು. ಉರ್ವದ ಅರುಣಾ ನಾಗರಾಜ್‌, ಕೋಟೆಕಾರ್‌ನ ವಿವೇಕ ಪೂಂಜ, ಮರಕಡದ ಶರಣಪ್ಪ, ಕುಂಬಳೆಯ ಶ್ಯಾಮಲಾ ರವಿರಾಜ್‌, ಧರ್ಮಸ್ಥಳದ ಸುಧಾಶ್ರೀ, ಮುಳ್ಳೇರಿಯಾದ ಚಂದ್ರಿಕಾ ಎಂ. ಶೆಣೈ, ಮಂಗಳೂರಿನ ಅರವಿಂದ ಪ್ರಭು ಹಾಗೂ ಯೆಯ್ಯಾಡಿಯ ಸತ್ಯವತಿ ಎಸ್.ಭಟ್‌ ಕನ್ನಡ ಕವನಗಳನ್ನು ವಾಚಿಸಿದರು.

ನಾರಾಯಣ ರೈ ಕುಕ್ಕುವಳ್ಳಿ ಮತ್ತು ಮಂಗಳೂರಿನ ವಿದ್ವತ್ ಶೆಟ್ಟಿ ತುಳು ಕವನಗಳನ್ನು, ಕೋಡಿಕಲ್‌ನ ವಿಶ್ವನಾಥ್‌ ಕೋಟೆಕಾರು ಇಂಗ್ಲಿಷ್‌ ಕವನವನ್ನು, ಪುತ್ತೂರಿನ ಡಾ.ದುರ್ಗಾರತ್ನ ಹಿಂದಿ ಕವನವನ್ನು, ಬಿಜೈನ ಜ್ಯೂಲಿಯೆಟ್‌ ಫೆರ್ನಾಂಡಿಸ್‌ ಮತ್ತು ಯೆಯ್ಯಾಡಿಯ ಚಾರ್ಲ್ಸ್ ಡಿಸೋಜ ಕೊಂಕಣಿ ಕವನಗಳನ್ನು ಹಾಗೂ ಬಂಟ್ವಾಳ ತಾಲ್ಲೂಕಿನ ಪೆರಾಜೆಯ ಶಂಶೀರ್ ಬುಡೋಳಿ ಬ್ಯಾರಿ ಭಾಷೆಯ ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT