ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದ್ರ ಕೊರೆತ: ಶಾಶ್ವತ ತಡೆಗೋಡೆಗೆ ಕ್ರಮ

ಹೆಜಮಾಡಿ ಬಂದರು, ನಿರುದ್ಯೋಗ ಸಮಸ್ಯೆ ನಿವಾರಣೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಆದ್ಯತೆ
Last Updated 12 ಜೂನ್ 2018, 6:25 IST
ಅಕ್ಷರ ಗಾತ್ರ

ಪಡುಬಿದ್ರಿ: ಶಂಕರಪುರ ಮಲ್ಲಿಗೆ, ಮಟ್ಟುಗುಳ್ಳ, ಕಾಪು ಲೈಟ್ ಹೌಸ್, ಐಎಸ್ ಪಿಆರ್ ಎಲ್, ಯುಪಿಸಿಎಲ್ ವಿದ್ಯುತ್ ಯೋಜನೆ, ಕುಂಜಾರುಗಿರಿ ಹೀಗೆ ಕೃಷಿ, ಪ್ರವಾಸೋದ್ಯಮ, ಕೈಗಾರಿಕಾ ಕ್ಷೇತ್ರವನ್ನು ಹೊಂದಿರುವ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಬಿಜೆಪಿಯ ಲಾಲಾಜಿ ಆರ್.ಮೆಂಡನ್ ಆಯ್ಕೆಯಾಗಿದ್ದಾರೆ. ಅವರು ಈ ಕ್ಷೇತ್ರದಲ್ಲಿ ಆರು ಭಾರಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2004 ಮತ್ತು 2008ರಲ್ಲಿ ಮಾಜಿ ಸಚಿವ ದಿ.ವಸಂತ ಸಾಲ್ಯಾನ್ ಅವರ ವಿರುದ್ಧ ಸ್ಪರ್ಧಿಸಿ ಜಯ ಗಳಿಸಿದ್ದರು. 2013ರಲ್ಲಿ ವಿನಯಕುಮಾರ್ ಸೊರಕೆ ಅವರ ವಿರುದ್ಧ ಅಲ್ಪ ಅಂತರದಲ್ಲಿ ಸೋಲು ಅನುಭವಿಸಿದ ಲಾಲಾಜಿ, ಈ ಬಾರಿ ಸೊರಕೆ ಅವರನ್ನು ಪರಾಭವಗೊಳಿಸಿ ಮತ್ತೆ ವಿಧಾನಸಭೆ ಪ್ರವೇಶ ಮಾಡಿದ್ದಾರೆ. ಕ್ಷೇತ್ರದ ಸವಾಲು ಮತ್ತು ಅವರ ಮುಂದಿನ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.

ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದೀರಿ. ಕ್ಷೇತ್ರದ ಪ್ರಮುಖ ಸಮಸ್ಯೆಗಳಲ್ಲಿ ಯಾವುದಕ್ಕೆ ಆದ್ಯತೆ ನೀಡುತ್ತೀರಿ?

ಹೆಜಮಾಡಿ ಮೀನುಗಾರಿಕಾ ಬಂದರಿನ ಹಲವು ವರ್ಷಗಳ ಇಲ್ಲಿನ ಮೀನುಗಾರರ ಕನಸಾಗಿದೆ. ಇದನ್ನು ಕೇಂದ್ರ ಹಾಗೂ
ರಾಜ್ಯ ಸರ್ಕಾರದೊಂದಿಗೆ ಶೀಘ್ರದಲ್ಲಿ ಮಾತುಕತೆ ನಡೆಸಿ, ಬಂದರು ನಿರ್ಮಾಣಕ್ಕೆ ಪ್ರಯತ್ನ ಮಾಡುತ್ತೇನೆ. ಕುಡಿಯುವ ನೀರಿನ ಸಮಸ್ಯೆ ಕ್ಷೇತ್ರದಾದ್ಯಂತ ಇದೆ. ಕೆಲವೆಡೆ ಉಪ್ಪು ನೀರಿನ ಪ್ರಭಾವದಿಂದ ಶುದ್ಧ ಕುಡಿಯುವ ನೀರು ಸಿಗುತಿಲ್ಲ. ಅದಕ್ಕಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕೇಂದ್ರ ಮತ್ತು
ರಾಜ್ಯ ಸರ್ಕಾರಗಳ ಜಂಟಿ ಯೋಜನೆಯಲ್ಲಿ ಬೆಳಪುವಿನಲ್ಲೊಂದು ವಿಜ್ಞಾನ ಸಂಶೋಧನಾ ಕೇಂದ್ರ ನಿರ್ಮಾಣವಾಗಬೇಕಾಗಿದೆ.
ತ್ಯಾಜ್ಯ ವಿಲೇವಾರಿ ಘಟಕ, ಸಮುದ್ರ ಕೊರೆತಕ್ಕೆ ಶಾಶ್ವತ ತಡೆಗೋಡೆಯಾಗಬೇಕು. ನದಿಯ ಮರಳು ಲಭ್ಯವಾಗದೆ ಕಟ್ಟಡ ಕಾಮಗಾರಿಗೆ ತಡೆಯಾಗಿದೆ. ನದಿಯ ಮರಳು ಕಾಮಗಾರಿಗೆ ಕಚ್ಚಾವಸ್ತುವಾಗಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು.

ಕಾಪು ಹೊಸ ತಾಲ್ಲೂಕಾಗಿದೆ. ತಾಲ್ಲೂಕು ಅಭಿವೃದ್ಧಿಗೆ ಏನು ಯೋಜನೆ ಹಾಕಿಕೊಂಡಿದ್ದೀರಿ?

ತಾಲ್ಲೂಕು ಘೋಷಣೆ ನಮಗೆಲ್ಲ ಸಂತೋಷವೇ. ಆದರೆ, ಕಾಪು ತಾಲ್ಲೂಕು ರಚನೆಗೆ ಅಷ್ಟೊಂದು ಬೇಡಿಕೆ ಈ ಭಾಗದ ಜನರಿಂದ ಇರಲಿಲ್ಲ. ಯಾವುದೇ ಪೂರ್ವ ತಯಾರಿ ಇಲ್ಲದೆ, ಮೂಲಸೌಕರ್ಯಗಳನ್ನು ಕೊಡದೆ ಬರೀ ಪತ್ರಿಕೆಯಲ್ಲಿ ಘೋಷಣೆಯಾದರೆ ಪ್ರಯೋಜನವಿಲ್ಲ. ಹೊಸ ತಾಲ್ಲೂಕಾಗಿ ಘೋಷಣೆ ಮಾಡುವಾಗ ಕಾಪುವನ್ನು ತಾಲ್ಲೂಕಾಗಿ ಮಾಡಲಾಗಿದೆ. ತಾಲ್ಲೂಕು ಕಚೇರಿ ಸಹಿತ ಹಲವಾರು ಇಲಾಖೆ ಕಚೇರಿಗಳು ಬೇಕಾಗಿದೆ. ಅಗತ್ಯ ಸಿಬ್ಬಂದಿ, ಕಟ್ಟಡ, ಮೂಲಸೌಕರ್ಯ ಬೇಕು. ಅದನ್ನು ತರಲು ಪ್ರಯತ್ನವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆ.

ಕಾಪುವಿನಲ್ಲಿ ಹಲವು ಬೃಹತ್ ಯೋಜನೆಗಳಿದ್ದರೂ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿಲ್ಲ. ಈ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳುವಿರಿ?

ಕಾಪು ಕ್ಷೇತ್ರದಲ್ಲಿ ಸುಜ್ಲಾನ್, ಯುಪಿಸಿಎಲ್ ವಿದ್ಯುತ್ ಸ್ಥಾವರ, ಐಎಸ್ ಪಿಆರ್ ಎಲ್ ಕೇಂದ್ರದ ಕಚ್ಚಾತೈಲ ಸಂಗ್ರಹಣಾ ಘಟಕ ಸೇರಿ ಮೂರು ಬೃಹತ್ ಯೋಜನೆಗಳಿವೆ. ಅಲ್ಲದೆ, ನಂದಿಕೂರು ಮತ್ತು ಬೆಳಪುವಿನಲ್ಲಿ ಕೈಗಾರಿಕಾ ಪಾರ್ಕ್‌ಗಳಿವೆ. ಇಲ್ಲಿ ಹಲವಾರು ಕೈಗಾರಿಕೆಗಳು ಆರಂಭಗೊಳ್ಳಲಿವೆ. ಆದರೆ, ಬೃಹತ್ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು
ಒತ್ತಡ ಹೇರಲಾಗುವುದು. ಒಟ್ಟಾರೆ, ಕಾಪುವಿನಲ್ಲಿ ಉದ್ಯೋಗ ಸೃಷ್ಟಿ ಅಧಿಕವಾಗಬೇಕು. ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು.

ಇಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಈ ಬಗ್ಗೆ ಏನಾದರೂ ಯೋಜನೆ ಹಾಕಿಕೊಂಡಿದ್ದೀರಾ?

ಕಾಪು ಕ್ಷೇತ್ರದಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಕಾಪು ದೀಪ ಸ್ತಂಭ ಬ್ರಿಟಿಷರ ಕಾಲದಲ್ಲಿ ಭಾರತೀಯರಿಂದ ನಿರ್ಮಿಸಲಾದ  ಬಹುದೊಡ್ಡ ಕೊಡುಗೆ. ಇಲ್ಲಿ ಕುಟುಂಬ ಸಮೇತರಾಗಿ ಬರುವ ಪ್ರವಾಸಿಗರನ್ನು ಬಹಳಷ್ಟು ಆಕರ್ಷಿಸುತ್ತಿದೆ. ಪೂರ್ಣ ಪ್ರಮಾಣದ ಜೀವ ರಕ್ಷಕರು ಇಲ್ಲಿಗೆ ಅಗತ್ಯ ಇದೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮೂಲಸೌಕರ್ಯಗಳು ಇನ್ನಷ್ಟು ಬೇಕಾಗಿದೆ. ಅದನ್ನು ವ್ಯವಸ್ಥಿತವಾಗಿ ಮಾಡಬೇಕಾಗಿದ್ದು, ಈ ಬಗ್ಗೆ ಗಮನ ಹರಿಸುತ್ತೇನೆ. ಅದೇ ರೀತಿ ಪಡುಬಿದ್ರಿ ಬೀಚ್ ನನ್ನ ಅವಧಿಯಲ್ಲೇ ಅಭಿವೃದ್ಧಿ ಹೊಂದಿತ್ತು. ಇನ್ನಷ್ಟು ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳಲಾಗುವುದು. ಧಾರ್ಮಿಕವಾಗಿ ಕುಂಜಾರು ಗಿರಿಯಲ್ಲಿರುವ ಪರಶುರಾಮ ಸೃಷ್ಟಿಯ ಪಾಜಕ ಕ್ಷೇತ್ರಗಳು ಇನ್ನಷ್ಟು ಅಭಿವೃದ್ಧಿ ಹೊಂದಬೇಕಾಗಿದೆ. ಒಟ್ಟಾರೆ, ಕಾಪು ಕ್ಷೇತ್ರ ಪ್ರವಾಸೋದ್ಯಮದಲ್ಲಿ ವಿಶ್ವದಲ್ಲಿ ಮಾದರಿಯಾಗಬೇಕಾಗಿದೆ.

ಎರಡು ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ನೀವೇ ಕೈ ಗೊಂಡ ಪ್ರಮುಖ ಯೋಜನೆಗಳೇನು?

ಎಂಟೂವರೆ ವರ್ಷಗಳ ಕಾಲ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಾಪುವಿನ ಪದವಿ ಕಾಲೇಜು, ಹಿಡಿಯಡ್ಕದ ಪದವಿ ಕಾಲೇಜು, ರಾಜೀವ್ ನಗರ ಮತ್ತು ಪೆರ್ಡೂರಿಗೆ ತಲಾ ₹ 3.60 ಕೋಟಿ ವೆಚ್ಚದಲ್ಲಿ ಎರಡು ಐಟಿಐ ವಿದ್ಯಾಸಂಸ್ಥೆ, ಬೆಳ್ಳಂಪಳ್ಳಿ ಪರೀಕಾ, ಆತ್ರಾಡಿ ಹತ್ತಿರ ₹ 6 ಕೋಟಿಯ ದೊಡ್ಡ ಒಂದು ಸೇತುವೆ ನಿರ್ಮಾಣ, ಅದೇ ರೀತಿ ಬಜೆ ಹಿರಿಯಡ್ಕ ಸುವರ್ಣ ನದಿಗೆ ಸೇತುವೆ, ಆಸುಪಾಸಿನಲ್ಲಿ ಎರಡು ಕಿಮೀ ವ್ಯಾಪ್ತಿಯಲ್ಲಿ ಎರಡು ದೊಡ್ಡ ಸೇತುವೆ ನಿರ್ಮಾಣವಾಗಿದೆ. ಕಾಪು, ಪಡುಬಿದ್ರಿ ಬೀಚ್‌ ಅಭಿವೃದ್ಧಿ. ಅಲ್ಲದೆ, ಜನತೆಗೆ ಸಂಪರ್ಕಕ್ಕೆ ಬೇಕಾಗಿ ಸಾಕಷ್ಟು ಕೊಡುಗೆಯನ್ನು ಕೊಟ್ಟಿದ್ದೇನೆ.

 ನಿಮ್ಮ ಗೆಲುವಿಗೆ ಪೂರಕವಾದ ಅಂಶಗಳು ಯಾವುವು?

ಕರಾವಳಿಯಲ್ಲಿ 24 ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿತ್ತು. ಇದು ಮಾತ್ರವಲ್ಲದೆ ರಾಜ್ಯ ಸರ್ಕಾರದ ವಿರುದ್ಧ ಜನ ಹತಾಶೆ ಭಾವನೆ ಹೊಂದಿದ್ದರು. ಅಲ್ಲದೆ, ಕ್ಷೇತ್ರ ಬಹಳಷ್ಟು ಸೂಕ್ಷ್ಮ ಪ್ರದೇಶ. ಎಲ್ಲರೂ ಸಾಮರಸ್ಯದಿಂದ ಬದುಕುವ ಪ್ರದೇಶ. ಆದರೆ, ಹಿಂದಿನ ಶಾಸಕರು ಇಲ್ಲಿ ಜನರನ್ನು ಒಡೆದಾಳುವ ನೀತಿ ಮಾಡಿದ್ದಾರೆ. ಇದರಿಂದ ಜನರು ಬದಲಾವಣೆ ಬಯಸಿದ್ದರು. ಕಾರ್ಯಕರ್ತರೊಂದಿಗೆ ಸಂಘಟಿತವಾಗಿ ನಡೆಸಿದ ಹೋರಾಟದ ಫಲವಾಗಿ ನನ್ನ ಗೆಲುವಿಗೆ ಕಾರಣವಾಯಿತು.

ಅಬ್ದುಲ್‌ ಹಮೀದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT