ಶಿವಮೊಗ್ಗ: ಬಗರ್ಹುಕುಂ ಸಾಗುವಳಿ ಸಕ್ರಮ ಕೋರಿ ಅರ್ಜಿ ಸಲ್ಲಿಸುವ ಅವಧಿಯನ್ನು ಮಾರ್ಚ್ 16ರವರೆಗೆ ವಿಸ್ತರಿಸಲಾಗಿದೆ. ಎಪಿಎಂಗೆ ನೀಡಿರುವ ನೆಡುತೋಪುಗಳ ವ್ಯಾಪ್ತಿಯಹುಲ್ಲುಬನಿ, ಗೋಮಾಳ, ಸೊಪ್ಪಿನಬೆಟ್ಟಗಳನ್ನೂ ಪರಿಗಣಿಸಬೇಕು ಎಂದುಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಸಂಚಾಲಕ ಎಂ.ಎಸ್.ಸಿದ್ದಪ್ಪ ಒತ್ತಾಯಿಸಿದರು.
ಹಿಂದೆ ಜಿಲ್ಲೆಯಲ್ಲಿ ಬಗರ್ಹುಕುಂ ಜಮೀನು ಸಾಗುವಳಿ ಮಾಡುತ್ತಿದ್ದ ಪರಿಶಿಷ್ಟರು, ಹಿಂದುಳಿದ ಜಾತಿಯ ಜನರು ಫಾರಂ 50 ಮತ್ತು 53ರ ಅಡಿ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆಗ ಹಲವರು ಅರ್ಜಿಯನ್ನೇ ಸಲ್ಲಿಸಿರಲಿಲ್ಲ. ಈಗ ಸಮ್ಮಿಶ್ರ ಸರ್ಕಾರ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಫಾರಂ 57 ಅಡಿ ಅರ್ಜಿ ಸಲ್ಲಿಸಲು 16ರವರೆಗೆ ಗಡುವು ನೀಡಲಾಗಿದೆ. ಜಿಲ್ಲೆಯ ಸಾಗುವಳಿದಾರರು ಈ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕೋರಿದರು.
ಎಂಪಿಎಂಗೆ ನೀಡಿರುವ ಹುಲ್ಲುಬನಿ, ಗೋಮಾಳ, ಸೊಪ್ಪಿನಬೆಟ್ಟಗಳಲ್ಲೂ ಪರಿಶಿಷ್ಟರು ಸಾಗುವಳಿ ಮಾಡಿಕೊಂಡಿದ್ದಾರೆ. ಈಗ ಕಾರ್ಖಾನೆ ಮುಚ್ಚಿರುವ ಕಾರಣ ಈ ಜಾಗವನ್ನೂ ಸಕ್ರಮದ ಅಡಿ ಪರಿಗಣಿಸಬೇಕು ಎಂದು ಮನವಿಮಾಡಿದರು.
ಅರಣ್ಯ ಇಲಾಖೆ ಈ ಜಾಗ ತಮ್ಮ ವಶಕ್ಕೆ ಪಡೆದುಕೊಳ್ಳಲು ಟ್ರಂಚ್ ಹೊಡೆಯುತ್ತಿದ್ದಾರೆ. ಈ ಪ್ರದೇಶಗಳನ್ನು ಹೊರತುಪಡಿಸಿ, ಹೊರಭಾಗದ ಜಮೀನುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳದಂತೆ ಸೂಚನೆ ನೀಡಬೇಕು ಎಂದು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮುಖಂಡರಾದ ಮಂಗಳಮ್ಮ, ಮಾರುತಿ, ಪ್ರಭು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.