ಶಿವಮೊಗ್ಗ: ಬಡಾವಣೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಅಶ್ವತ್ಥ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ನಿವಾಸಿಗಳು ಶನಿವಾರ ಮೇಯರ್ಗೆ ಮನವಿ ಸಲ್ಲಿಸಿದರು.
2ನೇ ವಾರ್ಡ್ನಿಂದ ಆಯ್ಕೆಯಾಗಿರುವ ಪಾಲಿಕೆ ಸದಸ್ಯರು ವಾರ್ಡ್ ಅಭಿವೃದ್ಧಿಗೆ ಗಮನ ನೀಡುತ್ತಿಲ್ಲ. ಆರ್ಟಿಒಗೆ ಬೆದರಿಕೆ ಹಾಕಿದ ಪ್ರಕರಣ ಅವರ ಮೇಲೆ ದಾಖಲಾಗಿರುವ ಕಾರಣ ಹಲವು ದಿನಗಳಿಂದ ನಾಪತ್ತೆಯಾಗಿದ್ದಾರೆ. ವಾರ್ಡ್ನಲ್ಲಿ ಹಲವು ಸಮಸ್ಯೆಗಳಿವೆ. ಈಗ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಕುಡಿಯುವ ನೀರು ಸಮಪರ್ಕವಾಗಿ ಪೂರೈಕೆ ಆಗುತ್ತಿಲ್ಲ. ಬೀದಿ ದೀಪಗಳು ಹಾಳಾಗಿ ಹಲವು ತಿಂಗಳು ಕಳೆದಿದ್ದರೂ ದುರಸ್ತಿ ಮಾಡಿಲ್ಲ. ಚರಂಡಿಗಳ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2019 –20ನೇ ಸಾಲಿನ ಪಾಲಿಕೆ ಬಜೆಟ್ ಮಂಡನೆಯಾಗಿದೆ. ಆದರೆ ಬಜೆಟ್ನಲ್ಲಿ ವಾರ್ಡ್ಗಳಲ್ಲಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಂಡಿಲ್ಲ. ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಅಶ್ವತ್ಥ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಾಗರಿಕರ ಸಂಘದ ಮುಖಂಡರಾದ ರಮೇಶ್ ರೆಡ್ಡಿ, ಲಕ್ಷ್ಮಮ್ಮ, ಭಾರತಿ, ಜಯಮ್ಮ, ಶಾಹಿನಾ, ನವೀನ್, ಗೀತಾ, ಜಯಂತಿ ಮನವಿ ಸಲ್ಲಿಸಿದರು.