ನಾಗಮಂಗಲ: ಮುಂದಿನ ಚುನಾ ವಣೆಯಲ್ಲಿ ಯಾರು ಅಧಿಕ ಮತ ಪಡೆಯುತ್ತಾರೋ ಅವರು ರಾಜ ಕೀಯದಲ್ಲಿ ಮುಂದುವರಿಯಲಿ. ಸೋತವರು ರಾಜಕೀಯ ನಿವೃತ್ತಿ ಪಡೆಯಲಿ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರು ಶಾಸಕ ಸುರೇಶ್ಗೌಡ, ಕಾಂಗ್ರೆಸ್ ಉಖಂಡ ಎನ್.ಚಲುವರಾಯಸ್ವಾಮಿ ಅವರಿಗೆ ಸವಾಲೆಸೆದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಕಾಂಗ್ರೆಸ್, ಜೆಡಿ ಎಸ್ ಮತ್ತು ಬಿಜೆಪಿ ಯಲ್ಲಿ ಕೆಲಸ ಮಾಡಿದ್ದೇನೆ. ಎಲ್ಲ ಪಕ್ಷದವರೂ ನನ್ನನ್ನು ಆಹ್ವಾನಿಸುತ್ತಿದ್ದು, ತಾಲ್ಲೂಕಿನಲ್ಲಿ ನನ್ನ ಶಕ್ತಿ ಏನೆಂದು ಅರಿತಿದ್ದಾರೆ. ಆದರೂ ನಾನು ಜನರ ಆಶಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ’ ಎಂದರು.
‘ಶಾಸಕ ಸುರೇಶ್ಗೌಡ ಹಾಗೂ ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಅವರು ಪಕ್ಷದ ಮುಖಂಡರಿಲ್ಲದೆ ವೈಯಕ್ತಿಕವಾಗಿ ಸಭೆ ಮಾಡಿ ಜನ ಸೇರಿಸಲಿ. ನಾನೂ ಸಭೆ ಮಾಡಿ ಜನ ಸೇರಿಸುತ್ತೇನೆ. ಅಲ್ಲಿ ಯಾರ ಶಕ್ತಿ ಏನೆಂದು ಗೊತ್ತಾಗಲಿ’ ಎಂದರು.
‘ಜುಲೈ 31ರ ಸಭೆಯಲ್ಲಿ ಎಲ್.ಆರ್.ಶಿವರಾಮೇಗೌಡ ಮತ್ತೆ ಜೆಡಿಎಸ್ ಪಕ್ಷ ಸೇರ್ಪಡೆ ವಿಚಾರದ ಮಾತುಕತೆ ನಡೆದಿದೆ. ಆದ್ದರಿಂದ ಶಿವರಾಮೇಗೌಡ ಬೆಂಬಲಿಗರೂ ಭಾಗವಹಿಸಬೇಕು ಎಂದು ಕೆಲವರು ನಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. ನನಗೂ ಜೆಡಿಎಸ್ ಪಕ್ಷದ ವರಿಷ್ಠರ ಕುರಿತು ಗೌರವವಿದೆ. ಆದರೆ, ಆ ಸಭೆಗೂ ನಮಗೂ ಸಂಬಂಧ ಇಲ್ಲ. ನಾನು ಜೆಡಿಎಸ್ ಪಕ್ಷಕ್ಕೆ ಸೇರುತ್ತೇನೆ ಎಂಬುದು ಸುಳ್ಳು’ ಎಂದರು.
ಮುಖಂಡರಾದ ಬಿದರಕೆರೆ ಮಂಜೇಗೌಡ, ವಕೀಲ ಟಿ.ಕೆ.ರಾಮೇಗೌಡ, ಪಾಳ್ಯ ರಘು, ರಾಜಣ್ಣ, ದೇವರಾಜು, ಪ.ಪಂ. ಮಾಜಿ ಸದಸ್ಯ ಲಾರಿ ಚನ್ನಪ್ಪ, ನಟರಾಜ್ ಇದ್ದರು.