ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಅಧ್ಯಕ್ಷರ ವಿರುದ್ಧ ಸಮಿತಿಯ 10 ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಿದರು.
ಎಪಿಎಂಸಿ ಅಧ್ಯಕ್ಷ ಪಾಲಹಳ್ಳಿ ಶಂಕರೇಗೌಡ ಅವರ ವಿರುದ್ಧ 10 ಮಂದಿ ಸದಸ್ಯರು ಶುಕ್ರವಾರ ಅವಿಶ್ವಾಸ ಮಂಡಿಸಿದರು. ಅವಿಶ್ವಾಸ ನಿರ್ಣಯ ಮಂಡನೆ ವೇಳೆ 13 ನಿರ್ದೇಶಕರ ಪೈಕಿ 11 ಮಂದಿ ಹಾಜರಿದ್ದರು. ಈ ಪೈಕಿ 10 ಮಂದಿ ಅವಿಶ್ವಾಸ ನಿರ್ಣಯದ ಪರ ಮತ ಹಾಕಿದರು.
ಸಮಿತಿಯ ಉಪಾಧ್ಯಕ್ಷ ಎ.ನಾಗರಾಜು ಅವರು ಪ್ರಭಾರಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಸ್ಥಾನಕ್ಕೆ ಆದಷ್ಟು ಶೀಘ್ರ ಚುನಾವಣೆ ನಡೆಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಗಾಯತ್ರಿದೇವಿ ತಿಳಿಸಿದರು.