ಹಲಗೂರು: ಸಮೀಪದ ಲಿಂಗಪಟ್ಟಣ ಗ್ರಾಮದಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದವರ ಹೆಜ್ಜೇನುಗಳು ದಾಳಿ ಮಾಡಿದ್ದರಿಂದ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಗ್ರಾಮದ ಮಲ್ಲೇಶ್ ಎಂಬುವವರು ಬುಧವಾರ ನಿಧನರಾಗಿದ್ದರು. ಗುರುವಾರ ಮಧ್ಯಾಹ್ನ ಅಂತ್ಯ ಸಂಸ್ಕಾರಕ್ಕೆ ಹೊತ್ತೊಯ್ಯುತ್ತಿದ್ದಾಗ ಲಿಂಗಪಟ್ಟಣ ಸರ್ಕಲ್ ಬಳಿ ಆಲದ ಮರದಲ್ಲಿದ್ದ ಹೆಜ್ಜೇನುಗಳು ತಮಟೆಯ ಸದ್ದಿಗೆ ಹಾರಾಡಿ ದಾಳಿ ಮಾಡಿವೆ. ಆಗ ಜನ ಶವವನ್ನು ದಾರಿಯಲ್ಲೇ ಬಿಟ್ಟು ಎಲ್ಲರೂ ಓಡಿ ಹೋದರು.
ಆ ಸಂದರ್ಭದಲ್ಲಿ ಲಿಂಗಪಟ್ಟಣದ ನಿಂಗಮ್ಮ, ನವೀನ್, ಅಣ್ಣಹಳ್ಳಿದೊಡ್ಡಿ ಲೋಕೇಶ್, ಧನಗೂರಿನ ಬಸವರಾಜು, ನರೀಪುರ ಗ್ರಾಮದ ವೆಂಕಟೇಶ್ ಅವರು ತೀವ್ರ ಗಾಯಗೊಂಡಿದ್ದಾರೆ. ಉಳಿದವರು ಸ್ವಲ್ಪ ಗಾಯಗೊಂಡಿದ್ದಾರೆ. ಹುಳುಗಳ ಹಾರಾಟ ನಿಂತ ನಂತರ ಶವವನ್ನು ಹೊತ್ತೊಯ್ದು ಅಂತ್ಯಕ್ರಿಯೆ ಮಾಡಲಾಯಿತು.
ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಮೇಘನಾಥ ಚಿಕಿತ್ಸೆ ನೀಡಿ ಮಾತನಾಡಿ, ‘ಹಲವು ಜನರಿಗೆ ಹೆಜ್ಜೇನು ಹುಳುಗಳು ದಾಳಿ ಮಾಡಿದ್ದು, ತಲೆ, ಮುಖ ಮತ್ತು ದೇಹದಲ್ಲಿ ಇದ್ದ ಮುಳ್ಳುಗಳನ್ನು ಹೊರತೆಗೆಯಲಾಗಿದೆ. ಇಬ್ಬರಿಗೆ ಜಾಸ್ತಿ ಕಚ್ಚಿವೆ. ತೀವ್ರ ನಿಗಾ ವಹಿಸಲಾಗುತ್ತಿದೆ. ಅವಶ್ಯಕತೆ ಬಂದರೆ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುವುದು’ ಎಂದು ಹೇಳಿದರು.