ಶ್ರೀರಂಗಪಟ್ಟಣ: ತಾಲ್ಲೂಕಿನ ಗಣಂಗೂರು ಬಳಿ ಕಾರೊಂದು ಡಿಕ್ಕಿಯಾಗಿ ಬಾಲಕ ಮತ್ತು ಎರಡು ಹಸುಗಳು ಸ್ಥಳದಲ್ಲೇ ಮೃತಪಟ್ಟಿವೆ.
ಕೆ.ಆರ್.ಪೇಟೆ ತಾಲ್ಲೂಕು ಬಲ್ಲೇನಹಳ್ಳಿ ಗ್ರಾಮದ ಲೋಕೇಶ್ ಅವರ ಮಗ ಆಕಾಶ್ (11) ಮೃತ ಬಾಲಕ.
ಗಣಂಗೂರು ಗ್ರಾಮದ ಇಂದ್ರಮ್ಮ ಅವರಿಗೆ ಸೇರಿದ, ಸುಮಾರು ₹70 ಸಾವಿರ ಬೆಲೆಯ ಎರಡು ಹಸುಗಳು ಅಸುನೀಗಿವೆ. ಆಕಾಶ್ ತನ್ನ ಅಜ್ಜಿಯ ಮನೆ ಗಣಂಗೂರು ಗ್ರಾಮದಲ್ಲಿದ್ದು, ಜಮೀನಿಗೆ ಹೋಗಲು ರಸ್ತೆ ದಾಟುವ ವೇಳೆ ಈ ಅವಘಡ ಸಂಭವಿಸಿದೆ.
ಬೆಂಗಳೂರು ಕಡೆಯಿಂದ ಬರುತ್ತಿದ್ದ ಕಾರು ಬಾಲಕ ಮತ್ತು ಹಸುಗಳಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಭಾಗಶಃ ಜಖಂಗೊಂಡಿದೆ. ಘಟನೆಯಿಂದಾಗಿ ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಪೊಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.