ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಎತ್ತಿನ ಗಾಡಿ ಓಟದ ಸ್ಪರ್ಧೆ ಮನ ರಂಜಿಸಿತು.
ಗ್ರಾಮದ ಶಂಭುಲಿಂಗೇಶ್ವರ ಯುವಕರ ಬಳಗ ಈ ಸ್ಪರ್ಧೆ ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ಮಂಡ್ಯ, ಮೈಸೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 80ಕ್ಕೂ ಜತೆ ಎತ್ತುಗಳು ಭಾಗವಹಿಸಿದ್ದವು. ಹಳ್ಳಿಕಾರ್ ಮತ್ತು ಅಮೃತ ಮಹಲ್ ತಳಿಯ ಎತ್ತುಗಳು ಹೆಚ್ಚು ಕಂಡು ಬಂದವು.
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್ಗೌಡ ಎತ್ತಿನ ಗಾಡಿ ಓಟದ ಸ್ಪರ್ಧೆಗೆ ಚಾಲನೆ ನೀಡಿದರು. ಶಂಭುಲಿಂಗೇಶ್ವರ ಯುವಕರ ಬಳಗದ ಧರ್ಮ, ಚೇತನ್, ಉಮೇಶ್, ಪುನೀತ್, ಚಂದನ್, ನವೀನ್, ರಘು, ಪ್ರಜ್ವಲ್, ಆನಂದ್, ತಿಮ್ಮೇಗೌಡ, ಪ್ರಮೋದ್ ಇದ್ದರು.
ಸ್ಪರ್ಧೆ ರದ್ದು: ಸ್ಪರ್ಧೆ ವೇಳೆ ಯುವಕರ ಗುಂಪುಗಳ ನಡುವೆ ಜಗಳ ನಡೆದು ಯುವಕನಿಗೆ ಚೂರಿಯಿಂದ ಇರಿಯಲಾಗಿದೆ.
ಪಾಲಹಳ್ಳಿಯ ಸಚಿನ್ ಎಂಬಾತನಿಗೆ ಮೈಸೂರು ತಾಲ್ಲೂಕು ಕಾಮನಕೆರೆಹುಂಡಿ ಗ್ರಾಮದ ಯುವಕ ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಚೂರಿ ಇರಿತದಿಂದ ಸಚಿನ್ ಅವರ ಕರುಳು ಹೊರಗೆ ಬಂದಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗೂ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪಟ್ಟಣ ಠಾಣೆಯ ಎಸ್.ಐ ಟಿ.ರೇಖಾ ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಎತ್ತಿನ ಗಾಡಿ ಓಟದ ಸ್ಪರ್ಧೆಯನ್ನು ರದ್ದುಗೊಳಿಸಲಾಗಿದೆ.