ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿ ಬಳಿ ಮೇಕೆಗಳ ಮೇಲೆ ದಾಳಿ ನಡೆಸಿ ಎರಡು ಮೇಕೆಗಳನ್ನು ಕೊಂದಿದ್ದ ಮೊಸಳೆಯನ್ನು ಸೋಮವಾರ ಸೆರೆ ಹಿಡಿಯಲಾಯಿತು.
ಗ್ರಾಮದ ಓಣಿ ಮಾರಮ್ಮ ದೇವಾಲಯದ ಬಳಿ, ವಿರಿಜಾ ನಾಲೆಯ ತೂಬಿನಲ್ಲಿ ಸೇರಿಕೊಂಡಿದ್ದ ಮೊಸಳೆಯನ್ನು ಸ್ಥಳೀಯರ ಜತೆಗೂಡಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.
ರಂಗನತಿಟ್ಟು ಪಕ್ಷಿಧಾಮದ ವಲಯ ಅರಣ್ಯಾಧಿಕಾರಿ ಕೆ.ಸುರೇಂದ್ರ ನೇತೃತ್ವದ 25 ಜನರ ತಂಡ ಬಲೆ ಮತ್ತು ಮರದ ತುಂಡುಗಳ ಸಹಾಯದಿಂದ ಮೊಸಳೆಯನ್ನು ಸೆರೆ ಹಿಡಿಯಿತು. ನಂತರ ಮೊಸಳೆಯನ್ನು ಕಬ್ಬಿಣದ ಬೋನಿಗೆ ಸ್ಥಳಾಂತರಿಸಲಾಯಿತು.
ಮೊಸಳೆ ಸೆರೆಗೆ ಹಲವು ಬಾರಿ ಕಾರ್ಯಾಚರಣೆ ನಡೆಸಲಾಗಿತ್ತು. ವಿರಿಜಾ ನಾಲೆಯ ತೂಬಿನಲ್ಲಿ ಮೊಸಳೆ ಇರುವ ಬಗ್ಗೆ ರೈತರು ಮಾಹಿತಿ ನೀಡಿದ್ದರಿಂದ ಕಾರ್ಯಾಚರಣೆ ನಡೆಸಿದ್ದೇವೆ. ಸೆರೆ ಹಿಡಿದಿರುವ ಮೊಸಳೆಯನ್ನು ನಾಗರಹೊಳೆ ಅರಣ್ಯದ ನೀರಿಗೆ ಬಿಡಲಾಗುವುದು ಎಂದು ಸುರೇಂದ್ರ ತಿಳಿಸಿದರು.
ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಪಾಲಹಳ್ಳಿಯ ಕೇಶವ, ಕೃಷ್ಣಪ್ಪ, ಹೋಟೆಲ್ ಪ್ರಸನ್ನ, ಮರಳಾಗಾಲ ಮಂಜುನಾಥ್ ಪಾಲ್ಗೊಂಡಿದ್ದರು.