ಮಂಡ್ಯ:ಸ್ಯಾಟಲೈಟ್ ಫೋನ್ ಬಳಸಿ ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು ಎಂಬ ಆರೋಪದ ಮೇಲೆ ನಾಲ್ವರು ಶಂಕಿತ ಉಗ್ರರನ್ನು ರಾಷ್ಟ್ರೀಯ ಭದ್ರತಾ ಪಡೆ (ಎನ್ಐಎ) ಸಿಬ್ಬಂದಿ ಶನಿವಾರ ಶ್ರೀರಂಗಪಟ್ಟಣದಲ್ಲಿ ಬಂಧಿಸಿದ್ದಾರೆ ಎನ್ನಲಾಗಿದೆ.
ಮೈಸೂರು ದಸರಾ ಜಂಬೂಸವಾರಿಗೆ ಒಂದು ದಿನ ಬಾಕಿ ಇರುವಾಗ ಈ ಸುದ್ದಿ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಜಂಬೂ ಸವಾರಿಯನ್ನೇ ಗುರಿಯಾಗಿಸಿಕೊಂಡು ಸ್ಫೋಟ ನಡೆಸಲು ಅಡಗಿದ್ದರು. ಸ್ಯಾಟಲೈಟ್ ಫೋನ್ ಸಿಗ್ನಲ್ ಆಧರಿಸಿ ಬಂಧಿಸಲಾಗಿದೆ. ಮತ್ತಷ್ಟು ಶಂಕಿತರು ಅಡಗಿ ಕುಳಿತಿದ್ದಾರೆ ಎಂದು ಹೇಳಲಾಗುತ್ತಿದೆ. ಶಂಕಿತ ಉಗ್ರರ ಗುರುತು ಪತ್ತೆಯಾಗಿಲ್ಲ.
ರಾಷ್ಟ್ರೀಯ ಭದ್ರತಾ ಪಡೆಯ ಸಿಬ್ಬಂದಿ ಜಿಲ್ಲೆಗೆ ಭೇಟಿ ನೀಡಿರುವ ಮಾಹಿತಿ ಸ್ಥಳೀಯ ಪೊಲೀಸರಲ್ಲಿ ಇಲ್ಲ.
‘ಎನ್ಐಎ ಸಿಬ್ಬಂದಿ ಭೇಟಿ ನೀಡಿರುವುದು, ಶಂಕಿತ ಉಗ್ರರ ಬಂಧನ ಕುರಿತು ಯಾವುದೇ ಮಾಹಿತಿ ನಮಗೆ ಬಂದಿಲ್ಲ. ನಾನು ರಾಜ್ಯ ಹಾಗೂ ಕೇಂದ್ರೀಯ ಗುಪ್ತಚರ ಇಲಾಖೆ ಸಂಪರ್ಕಿಸಿ ವಿಚಾರಿಸಿದ್ದೇನೆ. ಈ ಕುರಿತು ಯಾವುದೇ ಮಾಹಿತಿ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಹೇಳಿದರು.
ಉಗ್ರರ ಭೀತಿ ಇಲ್ಲ: ಡಿಸಿಪಿ
ಮೈಸೂರು ವರದಿ:ಉಗ್ರರನ್ನು ಬಂಧಿಸಿರವಮಾಹಿತಿಯನ್ನು ಮೈಸೂರು ಡಿಸಿಪಿ ಮುತ್ತುರಾಜ್ ಅಲ್ಲಗಳೆದಿದ್ದಾರೆ. ಮೈಸೂರು ದಸರಾಕ್ಕೆ ಉಗ್ರರಿಂದ ಭೀತಿ ಇಲ್ಲ ಎಂದು ಕೇಂದ್ರ ಗುಪ್ತಚರ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಬಂಧಿತರ ವಿವರಗಳು ಇಲ್ಲ ಎಂದೂ ತಿಳಿಸಿದ್ದಾರೆ.