ಕೆ.ಆರ್.ಪೇಟೆ: ‘ರಾಜಕೀಯ ಪಕ್ಷಗಳು ವಿತರಿಸಿದ್ದಾರೆ ಎನ್ನಲಾದ ಉಚಿತ ಊಟ, ಮದ್ಯದ ಟೋಕನ್ಗಳನ್ನು ಪಟ್ಟಣದ ಹೋಟೆಲ್, ಬಾರ್-ರೆಸ್ಟೋರೆಂಟ್, ಡಾಬಾಗಳಲ್ಲಿ ಸ್ವೀಕರಿಸಿದರೆ ಅವುಗಳ ಲೆಸೆನ್ಸ್ ರದ್ದು ಮಾಡಲಾಗುವುದು’ ಎಂದು ಚುನಾವಣಾಧಿಕಾರಿ ಕೃಷ್ಣಮೂರ್ತಿ ಎಚ್ಚರಿಸಿದರು.
ಕ್ಷೇತ್ರದಲ್ಲಿ ಉಚಿತ ಟೋಕನ್ ವಿತರಣೆ ಮಾಡುತ್ತಿರುವ ಬಗ್ಗೆ ಗುರುವಾರ ಪ್ರಜಾವಾಣಿಯಲ್ಲಿ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿ ನಡೆಸಿದರು.
‘ಗುರುವಾರ ಹೋಟೆಲ್, ಡಾಬಾ, ಬಾರ್ ಮಾಲೀಕರ ಸಭೆ ನಡೆಸಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಟೋಕನ್ ಸ್ವೀಕರಿಸಿದರೆ ಹೋಟೆಲ್ ಬಂದ್ ಮಾಡಲಾಗುವುದು. ಚುನಾವಣಾ ಸಿಬ್ಬಂದಿ ಕ್ಷೇತ್ರದಾದ್ಯಂತ ಪರಿಶೀಲನೆ ನಡೆಸುತ್ತಿದ್ದಾರೆ. ರಾಜಕೀಯ ಪಕ್ಷಗಳು ಮತದಾರಿಗೆ ಆಮಿಷವೊಡ್ಡುವ ಯಾವುದೇ ಟೋಕನ್ ವಿತರಣೆ ಮಾಡಿದರೆ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.
‘ಬುಧವಾರ ರಾತ್ರಿ ಹಿರೀಕಳಲೆ ಚೆಕ್ ಪೋಸ್ಟ್ ಬಳಿ ₹ 1.85 ಲಕ್ಷ ಮೌಲ್ಯದ 619 ಸೀರೆ ವಶಕ್ಕೆ ಪಡೆಯಲಾಗಿದೆ. ಈ ಹಿಂದೆ ₹ 39 ಸಾವಿರ ಮೌಲ್ಯದ 130 ಸೀರೆ ವಶಪಡಿಸಿಕೊಳ್ಳಲಾಗಿತ್ತು’ ಎಂದರು.