ಮದ್ದೂರು: ಹಾಲಿನ ಉತ್ಪನ್ನಗಳು, ಹೈನುಗಾರಿಕೆ ಯಂತ್ರೋಪ ಕರಣಗಳ ಮೇಲೆ ವಿಧಿಸಿರುವ ಜಿಎಸ್ಟಿ ರದ್ದರಿಗೆ ಆಗ್ರಹಿಸಿ ಮದ್ದೂರು ತಾಲ್ಲೂಕು ಹಾಲು ಉತ್ಪಾದಕ ರೈತರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಮದ್ದೂರು ತಾಲ್ಲೂಕು ಕಚೇರಿ ಎದುರು ಬುಧವಾರ ಪ್ರತಿಭಟಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಮಾತನಾಡಿ, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಈಗ ರೈತರ ಉತ್ಪನ್ನಗಳಿಗೆ ತೆರಿಗೆ ಹಾಕುವ ಮೂಲಕ ರೈತರ ನಷ್ಟವನ್ನು ದುಪ್ಪಟ್ಟು ಗೊಳಿಸುತ್ತಿದ್ದಾರೆ ಎಂದು ದೂರಿದರು.
ಗೆಜ್ಜಲಗೆರೆ ಪ್ರಾಥಮಿಕ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ್ ಮಾತನಾಡಿ, ನಷ್ಟದಲ್ಲಿರುವ ಜಿಲ್ಲೆಯ ಹೈನುಗಾರಿಕೆಗೆ ಜಿಎಸ್ಟಿಯಿಂದ ಮತ್ತಷ್ಟು ತೊಂದರೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಡಾ.ಸ್ವಾಮಿನಾಥನ್ ವರದಿ ಶಿಫಾರಸು ಪ್ರಕಾರ ಲೀಟರ್ ಹಾಲಿಗೆ ಕನಿಷ್ಠ ₹ 50 ನೀಡಬೇಕು. ಹೈನುಗಾರಿಕೆ ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಕ್ರಮ ವಹಿಸಬೇಕು. ಹೈನುಗಾರಿಕೆಗೆ ಮಾರಕವಾಗಿರುವ ಜಾನುವಾರು ಸಂರಕ್ಷಣಾ ಹಾಗೂ ಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸಬೇಕು. ಪಶು ಆಹಾರಗಳ ಬೆಲೆ ನಿಯಂತ್ರಿಸಬೇಕು ಎಂದರು.
ತಾಲ್ಲೂಕಿನ 20 ಪ್ರಾಥಮಿಕ ಹಾಲು ಉತ್ಪಾದಕ ಸಹಕಾರ ಸಂಘ ಗಳು ಜಿಎಸ್ಟಿ ರದ್ದುಪಡಿಸಲು ಆಗ್ರಹಿಸಿ ಸಂಗ್ರಹಿಸಿದ್ದ 1,268 ಹೈನುಗಾರರ ಸಹಿ ಒಳಗೊಂಡ ಹಕ್ಕೊ ತ್ತಾಯ ಪತ್ರವನ್ನು ತಹಶೀಲ್ದಾರ್ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಳುಹಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಮುಖಂಡರಾದ ಜವರೇಗೌಡ, ಟಿ.ಆರ್.ಸಿದ್ದೇಗೌಡ, ರಾಮಣ್ಣ, ಶಿವು, ಹೊನ್ನಯ್ಯ, ಮಹ ದೇವಸ್ವಾಮಿ, ಉಮೇಶ್, ರುದ್ರೇಶ್, ರಮೇಶ್, ಅರುಣ್ ಕುಮಾರ್, ರವಿಂದ್ರ, ರಾಮಲಿಂಗೇಗೌಡ ಇದ್ದರು.