ಶ್ರೀರಂಗಪಟ್ಟಣ: ಲೋಕಪಾವನಿ ನದಿಯಲ್ಲಿ ಕೊಚ್ಚಿ ಹೋಗಿದ್ದ, ತಾಲ್ಲೂಕಿನ ಬಾಬು ರಾಯನಕೊಪ್ಪಲು ಗ್ರಾಮದ ರೈತ ಸೋಮೇಶ್ವರ (20) ಶವ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ.
ತುಸು ಆಳವಿದ್ದ ಸ್ಥಳದಲ್ಲಿ ಸಿಲುಕಿಕೊಂಡಿದ್ದ ಶವವನ್ನು ಈಜುಗಾರರು, ಅಗ್ನಿಶಾಮಕ ಸಿಬ್ಬಂದಿ ಮೇಲೆ ಎತ್ತಿದರು. ತಹಶೀಲ್ದಾರ್ ಸ್ಥಳದಲ್ಲಿದ್ದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವದ ಪಂಚನಾಮೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಆಸ್ಪತ್ರೆಯ ಆವರಣದಲ್ಲಿ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಸೇರಿದ್ದರು.
ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಿಗ್ಗೆ ಸುರಿದ ಅಕಾಲಿಕ ಮಳೆಯಿಂದಾಗಿ ಲೋಕಪಾವನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಎತ್ತುಗಳು ಮತ್ತು ಗಾಡಿಯನ್ನು ತೊಳೆಯಲು ನದಿಗಿಳಿದಿದ್ದ ಇಬ್ಬರ ಪೈಕಿ ಸೋಮೇಶ್ವರ ಕೊಚ್ಚಿ ಹೋಗಿದ್ದರು. ಅವರ ಜತೆಯಲ್ಲಿದ್ದ ಶಿವು ಅಪಾಯದಿಂದ ಪಾರಾಗಿದ್ದರು.