ಶ್ರೀರಂಗಪಟ್ಟಣ: 18 ತಿಂಗಳು ಕಳೆದರೂ ಕಬ್ಬು ಕಟಾವು ಮಾಡಲಾಗದೆ ಮನನೊಂದು ತಾಲ್ಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ರೈತ ಪುಟ್ಟಸಿದ್ದೇಗೌಡ (53) ವಿಷಪೂರಿತ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಮಾತ್ರೆ ಸೇವಿಸಿದ್ದು, ಬುಧವಾರ ಮುಂಜಾನೆ ಕೆ.ಆರ್. ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಮೃತ ಪುಟ್ಟಸಿದ್ದೇಗೌಡ ಅವರ ಕುಟುಂಬಕ್ಕೆ 10 ಎಕರೆ ಜಮೀನು ಇದ್ದು, 4 ಎಕರೆಯಲ್ಲಿ ಕಬ್ಬು ಬೆಳೆದಿದ್ದರು. 18 ತಿಂಗಳಾದರೂ ಗದ್ದೆಯಿಂದ ಕಬ್ಬು ಸಾಗಿಸಲು ಆಗಿರಲಿಲ್ಲ. ಕಬ್ಬು ಬೆಳೆಯಲು ಕೈಸಾಲವನ್ನೂ ಮಾಡಿದ್ದರು ಎಂದು ಗ್ರಾಮದ ಮುಖಂಡ ಶಿವಮಲ್ಲು ತಿಳಿಸಿದ್ದಾರೆ.
ಪುಟ್ಟಸಿದ್ದೇಗೌಡ ಅವರನ್ನು ಆಸ್ಪತ್ರೆಗೆ ಸೇರಿಸುವಾಗ ತಾವು ಮೈಸೂರು ಅಶೋಕಪುರಂ ನಿವಾಸಿ ಎಂದು ಹೇಳಿಕೆ ನೀಡಿದ್ದ ಮೇರೆಗೆ ಅಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಟ್ಟಣದ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.