ಶ್ರೀರಂಗಪಟ್ಟಣ: ತಾಲ್ಲೂಕಿನ ಗೌಡಹಳ್ಳಿ ಸಮೀಪ, ಜೀವನ ರಕ್ಷಾ ಕೇಂದ್ರದ ಬಳಿ ಬುಧವಾರ ವಿದ್ಯುತ್ ಕಿಡಿ ಉದುರಿ ಅರಣ್ಯಕ್ಕೆ ಬೆಂಕಿ ಹೊತ್ತಿಕೊಂಡಿತ್ತು.
ಸುಮಾರು ಎರಡು ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಹಸಿ ಸೊಪ್ಪು ಬಳಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಕಡತನಾಳು ಗ್ರಾಮದ ಜಯಶಂಕರ್ ಮತ್ತು ಸುರೇಶ್ ಬೆಂಕಿ ನಂದಿಸಲು ಸಹಕರಿಸಿದರು. ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ದಟ್ಟ ಅರಣ್ಯಕ್ಕೆ ಬೆಂಕಿ ಹರಡುವುದನ್ನು ತಪ್ಪಿಸಿದರು.
ಅರಣ್ಯದ ಮಧ್ಯೆ ಹಾದು ಹೋಗಿರುವ ವಿದ್ಯುತ್ ತಂತಿಯಿಂದ ಕಿಡಿ ಉದುರಿ ಬೆಂಕಿ ಹೊತ್ತಿಕೊಂಡಿದೆ. ಬೆಂಗಳೂರು– ಮೈಸೂರು ಹೆದ್ದಾರಿ ಪಕ್ಕದಲ್ಲಿ ಈ ಘಟನೆ ನಡೆದಿದ್ದು, ತಕ್ಷಣ ಗೋಚರಿಸಿತು. ಹಾಗಾಗಿ ತಕ್ಷಣ ಬೆಂಕಿ ನಂದಿಸಿದೆವು ಎಂದು ವನಪಾಲಕ ರವಿ ತಿಳಿಸಿದರು. ಸ್ಥಳಕ್ಕೆ ಆರ್ಎಫ್ಒ ಸುನೀತಾ ಭೇಟಿ ನೀಡಿದ್ದರು.