ಕಿಕ್ಕೇರಿ: ‘ಅನರ್ಹ ಶಾಸಕ ನಾರಾಯಣಗೌಡ ಪಕ್ಷಕ್ಕೆ ಮೋಸ ಮಾಡಿದ್ದಾನೆ. ಜೆಡಿಎಸ್ನಿಂದ ಎರಡು ಬಾರಿ ಗೆದ್ದು ಅಧಿಕಾರ ಅನುಭವಿಸಿದರೂ ದ್ರೋಹ ಮಾಡಿದ್ದಾನೆ. ಆತನಿಗೆ ಹ್ಯಾಟ್ರಿಕ್ ಗೆಲುವು ಅಸಾಧ್ಯವಾಗಿದೆ’ ಎಂದು ಶಾಸಕ ಎಚ್.ಡಿ. ರೇವಣ್ಣ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಹೋಬಳಿಯ ಸಿದ್ದಾಪುರ ಗ್ರಾಮದಲ್ಲಿ ಬುಧವಾರ ಪ್ರಚಾರ ನಡೆಸಿ ಮಾತನಾಡಿದರು.
‘ಜೆಡಿಎಸ್ ಎಂದರೆ ಕುಟುಂಬ ವ್ಯವಸ್ಥೆ, ಇದನ್ನು ಕುಟುಂಬ ರಾಜಕೀಯ ಎಂದು ತಪ್ಪಾಗಿ ಹೇಳುತ್ತಾರೆ. ಕಾರ್ಯಕರ್ತರ ಕುಟುಂಬ ಬಲುದೊಡ್ಡ ದಾಗಿದೆ. ಮುಂಬೈನಿಂದ ಬಂದ ನಾರಾಯಣಗೌಡರಿಗೆ ರಾಜಕೀಯ ಭವಿಷ್ಯ ನೀಡಿ ಮನೆ ಮಗನಂತೆ ಕಂಡವರು ಕುಮಾರಣ್ಣ, ದೇವೇಗೌಡರು. ಅವರ ಒಳ್ಳೆಯತನವನ್ನು ನಾರಾಯಣಗೌಡ ದುರುಪಯೋಗ ಮಾಡಿಕೊಂಡಿದ್ದಾನೆ’ ಎಂದರು.
‘ಕಡಹೆಮ್ಮಿಗೆ ಬಳಿ ಏತನೀರಾವರಿಗೆ ಕೊಟ್ಟಿರುವ ಹಣ ಜೆಡಿಎಸ್ ಕೊಡುಗೆಯಲ್ಲವೆ? ಕೆ.ಆರ್.ಪೇಟೆ ತಾಲ್ಲೂಕಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ಎಂವಿಎಸ್ಎಸ್ ಪವರ್ ಸ್ಟೇಷನ್, ನಾಲುವೆ ದುರಸ್ತಿ ಕಾಮಗಾರಿಗೆ ನೀಡಿರುವುದು ದುಡ್ಡಲ್ಲವೆ? ಮತದಾರರು ದಡ್ಡರಲ್ಲ’ ಎಂದು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮಾತನಾಡಿ, ‘ಪ್ರಕೃತಿ ವಿಕೋಪದ ನೂರಾರು ಸಮಸ್ಯೆ ಯಲ್ಲಿಯೂ ರೈತರಿಗೆ ನೀರು, ವಿದ್ಯುತ್ ಸೌಲಭ್ಯವನ್ನು ಕುಮಾರಣ್ಣ ಕೊಟ್ಟಿದ್ದಾರೆ. ಸಾಲಮನ್ನಾ ಮಾಡಿದ್ದಾರೆ. ವಾಮ ಮಾರ್ಗದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ತಾಲ್ಲೂಕಿನ ಜನತೆ ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಚನ್ನರಾಯಪಟ್ಟಣ ಶಾಸಕ ಸಿ.ಎನ್. ಬಾಲಕೃಷ್ಣ, ಎಸ್ಟಿಡಿ ರಮೇಶ್, ಸುರೇಶ್, ಬೋಜೇಗೌಡ, ಕೋಟಹಳ್ಳಿ ಶ್ರೀನಿವಾಸ್, ಕೋಡಿ ಮಾರನಹಳ್ಳಿ ಮಂಜೇಗೌಡ, ಆನಂದ್ ಇದ್ದರು.