ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರದ ಪ್ರಸನ್ನ ಎಂಬುವರ ಜಮೀನಿನ ಬಳಿ ಶನಿವಾರ ಹೆಬ್ಬಾವು ಪ್ರತ್ಯಕ್ಷವಾಗಿದೆ.
ಸುಮಾರು 12 ಅಡಿ ಉದ್ದದ 40 ಕೆ.ಜಿ ತೂಕದಷ್ಟಿರುವ ಹೆಬ್ಬಾವು ಕಾಣಿಸಿಕೊಂಡಿದೆ. ತೋಟದ ಮನೆಯ ಕೋಳಿ ಸಾಕಣೆ ಕೇಂದ್ರದ ಬಳಿ ಹಾವು ಪತ್ತೆಯಾಗಿದೆ. ಅದು ಕೋಳಿಯನ್ನು ನುಂಗುವ ವೇಳೆ ಕೋಳಿಗಳ ಚೀರಾಟ ಕೇಳಿ ಪ್ರಸನ್ನ ಧಾವಿಸಿದ್ದಾರೆ. ದೊಣ್ಣೆಯಿಂದ ಹಾವಿನ ತಲೆಯನ್ನು ಅದುಮಿ ಕೋಳಿಯನ್ನು ಬಿಡಿಸಿದ್ದಾರೆ.
ತೋಟದಿಂದ ಗ್ರಾಮಕ್ಕೆ ಹೆಬ್ಬಾವು ತಂದು ಕೆಲಕಾಲ ಇರಿಸಿಕೊಂಡಿದ್ದರು. ಯುವಕರು ಹೆಬ್ಬಾವಿನ ಜತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು. ಹಾವನ್ನು ನೋಡಲು ಜನರು ಮುಗಿ ಬಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಮಧು ಹೆಬ್ಬಾವನ್ನು ವಶಕ್ಕೆ ಪಡೆದರು. ನಂತರ ಸಮೀಪದ ಕಾಡಿಗೆ ಬಿಡಲಾಯಿತು.