ಕೆ.ಆರ್.ಪೇಟೆ: ‘ಕುರುಬ ಸಮಾಜದ ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಮಾಡಿರುವ ಕಾನೂನು ಸಚಿವ ಮಾಧುಸ್ವಾಮಿ ಉಪ ಚುನಾವಣೆ ಪ್ರಚಾರಕ್ಕೆ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು’ ಎಂದು ಸಮಾಜದ ಮುಖಂಡರು ಬುಧವಾರ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಗಳನ್ನು ಅವಮಾನಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಕೆ.ಆರ್.ಪೇಟೆ ಉಪ ಚುನಾವಣೆಯ ಉಸ್ತುವಾರಿ ಹೊತ್ತಿರುವ ಮಾಧುಸ್ವಾಮಿ ಪ್ರಚಾರಕ್ಕೆ ಬಂದರೆ ಪ್ರತಿಭಟನೆ ಎದುರಿಸಬೇಕು. ಅದರಿಂದ ತಪ್ಪಿಸಿಕೊಳ್ಳಲು ಅವರು ಕೂಡಲೇ ಸ್ವಾಮೀಜಿಗಳ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ಹುಳಿಯಾರು ವೃತ್ತಕ್ಕೆ ಭಕ್ತ ಕನಕದಾಸರ ಹೆಸರಿಡಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹಾಲುಮತ ಕುರುಬ ಸಮಾಜದ ಜನರು ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದಾರೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಲ್.ದೇವರಾಜು, ಪುರಸಭಾ ಸದಸ್ಯರಾದ ಕೆ.ಸಿ.ಮಂಜುನಾಥ್, ರವೀಂದ್ರಬಾಬು, ಕೆ.ಕೆ.ರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕಡೆಹೆಮ್ಮಿಗೆ ಶ್ಯಾಮಣ್ಣ, ಹಿರೀಕಳಲೆ ಮಂಜುನಾಥ್, ಸಣ್ಣನಿಂಗೇಗೌಡ, ರವಿ ಇದ್ದರು.
ರಾಜೀನಾಮೆಗೆ ಒತ್ತಾಯ: ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕುರುಬರ ಸಂಘ, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ನಾಗರಾಜು ‘ಕುರುಬ ಸಮಾಜಕ್ಕೆ ಹಾಗೂ ಈಶ್ವರಾನಂದಪುರಿ ಸ್ವಾಮೀಜಿಗೆ ಅವಮಾನ ಮಾಡಿರುವ ಸಚಿವ ಮಾಧುಸ್ವಾಮಿ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ಧಾರೆ.